ಕೆಜಿಎಫ್ ಚಿತ್ರ ಸರಣಿಯ ಬೃಹತ್ ಗೆಲುವಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರವನ್ನು ಯಾವ ನಿರ್ದೇಶಕರ ಜತೆ ಮಾಡಲಿದ್ದಾರೆ ಎಂಬ ಪ್ರಶ್ನೆ ಹಾಗೂ ಕುತೂಹಲ ಒಂದು ವರ್ಷದಿಂದ ಕಾಡುತ್ತಲೇ ಇದೆ. ಏಪ್ರಿಲ್ 14ಕ್ಕೆ ಯಶ್ ನಟಿಸಿರುವ ಕೊನೆಯ ಚಿತ್ರ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ ಒಂದು ವರ್ಷ ಕಳೆದಿದ್ದು, ಇದಾದ ಬಳಿಕ ಯಶ್ ಮುಂದಿನ ಚಿತ್ರದ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ
ಇದನ್ನೂ ಓದಿ: ಮನಸೂರೆಗೊಳ್ಳುತ್ತಿದೆ ‘ಪರಂವಃ’ ಚಿತ್ರದ `ನೂರಾರು ರಂಗಿರೋ..’ ಹಾಡು
ಈ ಕುರಿತು ಯಶ್ ಅಭಿಮಾನಿಗಳು ಹಾಗೂ ಸಿನಿ ರಸಿಕರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರೂ ಸಹ ಯಶ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಆದರೆ ಯಶ್ ಈ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಯಶ್ ರವರಿಂದ ಒಂದು ಸಮಾಧಾನಕರ ಪತ್ರ ಬಂದಿತ್ತು. ಆದಷ್ಟು ಬೇಗ ಮುಂದಿನ ಚಿತ್ರದ ಅಪ್ಡೇಟ್ ನೀಡುವುದಾಗಿ ಯಶ್ ತಿಳಿಸಿದ್ದರು. ನಂತರ ಈ ಕುರಿತು ಎಲ್ಲಿಯೂ ರಾಕಿಂಗ್ ಸ್ಟಾರ್ ಮಾತನ್ನಾಡಿರಲಿಲ್ಲ. ಯಶ್ ತಮ್ಮ ಮುಂದಿನ ಚಿತ್ರದ ಕಥೆ ಕೇಳಿದ್ದಾರಾ ಅಥವಾ ಇಲ್ವಾ ಎಂಬ ಪ್ರಶ್ನೆ ಸಹ ಕಾಡಲು ಆರಂಭಿಸಿತ್ತು, ಇನ್ನೂ ಎಷ್ಟು ದಿನಗಳವರೆಗೆ ಈ ಕಾಯುವಿಕೆ ಎಂದೂ ಸಹ ಅಭಿಮಾನಿಗಳು ಅಪ್ಡೇಟ್ ಕೊಡಿ ಎಂದು ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಹೌದು, ಇಂದು ಅಂದರೇ ಜೂನ್ 21 ರಂದು ಪತ್ನಿ ಹಾಗೂ ಮಕ್ಕಳ ಜತೆ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಶ್ ಅಲ್ಲಿಯೇ ಮಾಧ್ಯಮದವರ ಜತೆ ಮಾತನಾಡಿದ್ದಾರೆ. ಈ ವೇಳೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿಯೂ ಕಾಡುತ್ತಿರುವ ‘ಯಶ್ 19’ಕುರಿತಾದ ಪ್ರಶ್ನೆ ಸಹ ಎದುರಾಗಿದೆ.
ಇದನ್ನೂ ಓದಿ: 23ರಿಂದ ಥಿಯೇಟರ್ನಲ್ಲಿ `ಮೊದಲಮಳೆ’ ಆರಂಭ!
ಈ ಪ್ರಶ್ನೆಗೆ ಉತ್ತರಿಸಿದ ಯಶ್ “ಹೇಳ್ತೀನಿ.. ಹಿಂಗ್ ಹೇಳೋಕಾಗುತ್ತಾ? ಒಂದಂತೂ ನಿಜ, ಜನ ನಮಗೆ ಏನು ಶಕ್ತಿ ಕೊಟ್ಟು ಬೆಳೆಸಿದ್ದಾರೆ, ಏನು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ, ನಾನು ನಂಬೋದು ಒಂದೇ. ಎಲ್ಲರೂ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ. ಆ ದುಡ್ಡಿಗೊಂದು ವ್ಯಾಲ್ಯೂ ಇರಬೇಕು. ನಾವು ಮಾಡೋ ಕೆಲಸದಲ್ಲಿ ಶ್ರದ್ಧೆ ಇರಬೇಕು. ಇಡೀ ದೇಶ ಅಥವಾ ಇಡೀ ಜಗತ್ತು ನೋಡ್ತಾ ಇದೆ. ಆ ಜವಾಬ್ದಾರಿ ನನ್ನ ಮೇಲಿದೆ. ದೇವರ ಸನ್ನಿಧಾನ ಸುಮ್ಮನೆ ಹೇಳೋದು ಬೇಡ. ಬಹಳ ದಿನಗಳಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಿದ್ದೀವಿ. ಅವರೆಲ್ಲರೂ ಖುಷಿ ಪಡೋ ರೀತಿ ಕೆಲಸ ಆಗುತ್ತೆ. ನಾನ್ ಹೇಳಿದ್ನಲ್ಲ, ನನಗೆ ಜವಾಬ್ದಾರಿ ಇದೆ. ಜನ ಫ್ರೀ ನೋಡೋ ಹಾಗೆ ಇದ್ದಿದ್ರೆ ನಮಗಿಷ್ಟ ಬಂದ ಹಾಗೆ ಮಾಡಬಹುದಿತ್ತು. ಅವರೇ ಬೆಳೆಸಿರುವುದು, ಅವರು ಖುಷಿಯಿಂದ ಇರುವ ರೀತಿಯ ಕೆಲಸವನ್ನು ನಾವು ಮಾಡಬೇಕು. ಆ ಜವಾಬ್ದಾರಿ ನನ್ನ ಮೇಲಿದೆ, ನಾನು ಮಾಡ್ತಾ ಇದ್ದೀನಿ” ಎಂದು ಯಶ್ ಹೇಳಿದರು. ಹೀಗೆ ಹೇಳಿಕೆ ನೀಡಿದ ಯಶ್ಗೆ “ಸ್ಕ್ರಿಪ್ಟ್ ರೆಡಿಯಾಗಿದೆಯಾ” ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಯಶ್ “ಆಗಿದೆ.. ಆಗಿದೆ.. ಎಲ್ಲ ಹೇಳ್ತೀನಿ” ಎಂದು ಹೇಳಿದರು. ಈ ಮೂಲಕ ಯಶ್ ಸ್ಕ್ರಿಪ್ಟ್ ಒಂದನ್ನು ಕೇಳಿ ಮೆಚ್ಚಿಕೊಂಡಿರುವುದನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಶಿವಣ್ಣ ಅಭಿನಯದ ‘ಸಾಗಾ ಆಫ್ ಅಶ್ವತ್ಥಾಮ’ ಬಗ್ಗೆ ನಿರ್ದೇಶಕರಿಂದಲೇ ಹೊಸ ಅಪ್ಡೇಟ್!
ಬಳಿಕ ಇನ್ನೂ ಎಷ್ಟು ದಿನಗಳು ಈ ಕಾಯುವಿಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಶ್ “ಏನ್ ಗೊತ್ತಾ? ನಾನಂತೂ ಒಂದು ದಿನ ಒಂದು ಕ್ಷಣ ವೇಸ್ಟ್ ಮಾಡಿಲ್ಲ. ಅಷ್ಟು ಕೆಲಸ ಇದೆ, ನಡೀತಾ ಇದೆ, ಮಾಡ್ತಾ ಇದ್ದೇವೆ. ಆದಷ್ಟು ಬೇಗ ಬರ್ತಿವಿ” ಎಂದು ಹೇಳಿದರು. ಈ ಮೂಲಕ ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ಆಯ್ಕೆಯಾಗಿದ್ದು, ಕೆಲಸಗಳು ಜಾಸ್ತಿ ಇದೆ, ಅದರಲ್ಲಿ ತಮ್ಮ ತಂಡ ನಿರತವಾಗಿದೆ, ಆದಷ್ಟು ಬೇಗ ಮಾಹಿತಿ ಹಂಚಿಕೊಳ್ತೇವೆ ಎಂದು ಹೇಳಿದರು.