ಇಂದು ರಾಜ್ಯಾದ್ಯಂತ ಹಲವು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಂತ ಕಾಲಾಪತ್ಥರ್ ಕೂಡ ಒಂದು. ಕೆಂಡಸಂಪಿಗೆ ಸಿನಿಮಾ ಮೂಲಕ ಹೀರೋ ಆಗಿ ಕನ್ನಡಿಗರಿಗೆ ಪರಿಚಯವಾಗಿದ್ದ ವಿಕ್ಕಿಗೆ ನಿರ್ದೇಶಕನಾಗಬೇಕೆಂಬ ಕನಸಿತ್ತು. ಆ ಕನಸಿನ ಕೂಸು ಇಂದು ರಾಜ್ಯಾದ್ಯಂತ ಥಿಯೇಟರ್ಗಳಲ್ಲಿ ಎಲ್ಲರನ್ನು ರಂಜಿಸಿದೆ. ಕಾಲಾಪತ್ಥರ್ ಸಿನಿಮಾ ನೋಡಿದ ಮಂದಿಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾದ್ರೆ ಸಿನಿಮಾ ಕಥೆ ಏನು..? ವಿಕ್ಕಿ ಹೇಳಿದ ರೀತಿ ಜನರಿಗೆ ಇಷ್ಟವಾಯ್ತಾ..? ಈ ಎಲ್ಲಾ ಡಿಟೈಲ್ಸ್ ಇಲ್ಲಿದೆ ನೋಡಿ.

ಮೂಡಲಪುರದ ಶಂಕ್ರ ಬಾರ್ಡರ್ ಸೆಕ್ಯೂಟಿರಿ ಫೋರ್ಸ್ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಾ ಇರುತ್ತಾನೆ. ಸೇನೆಯಲ್ಲಿ ಶಂಕರ ಬಾಣಸಿಗ. ಸೇನಾ ಬೆಟಾಲಿಯನ್ ಮೇಲೆ ಭಯೋತ್ಪಾದಕರ ದಾಳಿಯಾದಾಗ, ಅವರೆಲ್ಲರನ್ನು ಒಂಟಿಯಾಗಿ ಎದುರಿಸುತ್ತಾನೆ. ಆ ಘಟನೆಯ ಬಳಿಕ ಶಂಕರನಿಗೆ ದೊಡ್ಡ ಗೌರವ, ಮನ್ನಣೆ ಸಿಗುತ್ತದೆ. ಅಷ್ಟೇ ಯಾಕೆ ಎಲ್ಲಾ ಕಡೆ ನ್ಯೂಸ್ಗಳಲ್ಲೂ ಶಂಕ್ರನದ್ದೆ ಸುದ್ದಿ. ಊರಿನವರಿಗೂ ಹೆಮ್ಮೆಯಾಗುತ್ತದೆ. ಆ ಕಾರಣಕ್ಕಾಗಿಯೇ ಮೂಡಲಪುರದಲ್ಲಿ ಶಂಕ್ರನ ಕಲ್ಲಿನ ಪ್ರತಿಮೆಯೂ ತಲೆ ಎತ್ತುತ್ತದೆ. ಸೇನೆಯಿಂದ ರಜೆ ಮೇಲೆ ಹಳ್ಳಿಗೆ ಬರುವ ಶಂಕ್ರನಿಗೆ ತನ್ನ ಪ್ರತಿಮೆ ನೋಡಿ ಆಶ್ಚರ್ಯದ ಜತೆಗೆ ಬೇರೆ ಒಂದು ಭಾವ ಮೂಡುತ್ತದೆ. ಆ ಒಂದು ಕಲ್ಲಿನ ಪ್ರತಿಮೆಯಿಂದ ಶಂಕ್ರನ ಜೀವನದಲ್ಲಿ ಸಾಕಷ್ಟು ಏರಿಳಿತ ಘಟಿಸುತ್ತವೆ. ಅವಾಂತರಗಳು ಸಂಭವಿಸುತ್ತವೆ. ಈ ಎಲ್ಲವೂ ವಿಶೇಷವಾಗಿ ಕಾಡುತ್ತವೆ. ಥಿಯೇಟರ್ನಲ್ಲಿ ನೋಡಿದಾಗಲೇ ಅದಕ್ಕೆ ಹೆಚ್ಚು ಮಜಾ ಬರುವುದು.

ಸತ್ಯಪ್ರಕಾಶ್ ಅವರು ವಿಭಿನ್ನವಾಗಿ ಕಥೆ ಬರೆದಿದ್ದು, ಆ ಕಥೆಯನ್ನು ತೆರೆಮೇಲೆ ಅಷ್ಟೇ ವಿಭಿನ್ನವಾಗಿ ತೋರಿಸಿದ್ದಾರೆ. 114 ನಿಮಿಷಗಳಿರುವ ಈ ಸಿನಿಮಾ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ, ಎಳೆದಂತ ಭಾವನೆ ಅಂತು ಮೂಡುವುದಿಲ್ಲ. ವಿಕ್ಕಿ ಈಗಾಗಲೇ ನಿರ್ದೇಶನಕರ ಬಳಗದಲ್ಲಿ ಪಳಗಿರುವ ಕಾರಣ, ಇಲ್ಲಿ ಮೊದಲ ನಿರ್ದೇಶನ ಎನಿಸುವುದಿಲ್ಲ. ಕಥೆಯನ್ನು ಅಚ್ಚುಕಟ್ಟಾಗಿ ತೆಗೆದುಕೊಂಡು ಹೋಗಿದ್ದಾರೆ. ಅನೂಪ್ ಸೀಳಿನ್ ಅವರ ಸಂಗೀತವೂ ಕಿವಿಗೆ ಇಂಪು, ಮನಸ್ಸಿಗೆ ತಂಪು ನೀಡಿದೆ. ಉಳಿದಂತೆ ವಿಕ್ಕಿ ವರುಣ್ ನಟನೆ ಎಲ್ಲರಿಗೂ ಇಷ್ಟವಾಗುತ್ತದೆ. ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದರು ನಟನೆಗೆ ಎಲ್ಲಿಯೂ ಅದು ಸಮಸ್ಯೆ ನೀಡಿಲ್ಲ. ಉಳಿದಂತೆ ಧನ್ಯಾ ರಾಮ್ಕುಮಾರ್ ಸಿಕ್ಕ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಟಿ ಎಸ್ ನಾಗಾಭರಣ, ಸಂಪತ್, ರಾಜೇಶ್ ನಟರಂಗ ಅವರಂತಹ ಅನುಭವಿ ಕಲಾವಿದರು ತಮ್ಮ ಪಾತ್ರಗಳನ್ನು ಸರಾಗವಾಗಿ ನಿಭಾಯಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ ನಟ ಗಮನಸೆಳೆಯುತ್ತಾರೆ.

