by VENKATARAJU writer/actor
ಒಂದು ಸುಧೀರ್ಘ ಕಾಲಾವಧಿಯ ನಂತರ ಕಮಲಹಾಸನ್ ಅಭಿನಯದ ಚಿತ್ರ “ವಿಕ್ರಮ್“ವಿಶ್ವವ್ಯಾಪಿ ನಾನಾ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಇದನ್ನು ಕಮಲ್ ಕಮಾಲ್ ಎನ್ನಬಹುದು.1986ರಲ್ಲಿ ಕಮಲಹಾಸನ್ ಅಭಿನಯದಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದ್ದ“ವಿಕ್ರಮ್“ತಮಿಳು ಚಿತ್ರವು ಈಗ ಅದೇ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಿ.. ಆಗಿನ ಯಶಸ್ಸೇ ಪುನರಾವರ್ತನೆ ಆಗಿದೆ. ಈಗಿನ “ವಿಕ್ರಮ್ “ಚಿತ್ರ ನಿರ್ದೇಶಕ ಲೋಕೇಶ್ ಕನಕರಾಜ್. ಅತ್ಯಂತ ಸಂಯಮ ಹಾಗೂ ಜಾಣ್ಮೆಯಿಂದ ಕಥೆ ಹೆಣದಿದ್ದಾರೆ.
ಚಿತ್ರದ ಆರಂಭವೇ ಸರಣಿ ಕೊಲೆಗಳಲ್ಲಿ ಪ್ರಾರಂಭವಾಗುತ್ತದೆ. ನಾಯಕ ಕಮಲಹಾಸನ್ (ಕರ್ಣನ್) ಕೊಲೆಯಾಗುತ್ತಾನೆ. ಪೋಲೀಸು ಇಲಾಖೆ ಆಡಳಿತ ವ್ಯವಸ್ಥೆ ತಲ್ಲಣ ಗೊಳ್ಳುವ ಧಿಗ್ಭ್ರಾಂತ ಪರಿಸ್ಥಿತಿ ಉಂಟಾಗುತ್ತದೆ.ಪೋಲೀಸು ಇಲಾಖೆಯಲ್ಲಿಯೆ ,ಕಾನೂನು ,ಕಟ್ಟಳೆ ಧಿಕ್ಕರಿಸುವ ,ಶರವೇಗದಂತೆ ಮುನ್ನುಗ್ಗಿ ಕೊಲೆಗಳ ರಹಸ್ಯ ಭೇದಿಸುವ ಬೇಹುಗಾರ ಅಮರ್(ಫಾಸಿಲ್) ಯುವತಂಡದ ನಾಯಕತ್ವದಲ್ಲಿ ಕರ್ಣನ್ ಕೊಲೆ ಭೇದಿಸಲು ವಿಚಕ್ಷ ವ್ಯೂಹದ ಮಾಹಿತಿ ಕಲೆ ಹಾಕುತ್ತದೆ. ಸತ್ತ ಕರ್ಣನ್ ಹೆಜ್ಜೆ ಗುರುತುಗಳ ಜಾಡು ಹಿಡಿದು ಹೊರಟವಗೆ ಎಲ್ಲವೂ ಅಸ್ಪಷ್ಟ!..ತಲೆ ಕೆರೆದುಕೊಳ್ಳುವಷ್ಟು!ಸಿಕ್ಕು ಚಿತ್ರಕತೆಯಲ್ಲಿನ ತಿರುವಿನಲಿ ಪ್ರೇಕ್ಷಕ ಸಿಕ್ಕಿಬಿಡುತ್ತಾನೆ..ಈ ಹಂತದಲ್ಲಿ ಬೇಹುಗಾರ ತರುಣ ಅಮರ್ ತನ್ನ ಗೆಳತಿಯೊಂದಿಗೆ ನಿಶ್ಚಯವಾದ ಮದುವೆ ದಿನವನ್ನು ಮರೆತು ಬಿಡುವಷ್ಟು ಕೆಲಸದಲ್ಲಿ ತಲ್ಲೀನ!..ಸತ್ತ ವ್ಯಕ್ತಿ ಕರ್ಣನ್ ತನ್ನ ಸುತ್ತ ಕಲ್ಪಿತ ವಿಚಾರ,ವಿಪರೀತ ಕುಡೀತಿದ್ದ,ವೇಶ್ಯೆಯರ ಸಂಪರ್ಕ.. ಇತ್ತೆಂಬ, ಬೇರೂರಿಸಲ್ಪಟ್ಟ ಅಭಿಪ್ರಾಯ ವ್ಯಕ್ತಿಗಳ ಮೂಲಕ ಬಿತ್ತಿರುತ್ತಾನೆ. ಈ ಮುಸುಕನ್ನು ಸರಿಸುವ ಪ್ರಯತ್ನದಲಿ ಮೊದಲರ್ಧ ಚಿತ್ರ ಮುಕ್ತಾಯವಾಗಿ,ನಿಜನಾಯಕ “ವಿಕ್ರಮ್“(ಕಮಲಹಾಸನ್)ಮುನ್ನಲೆಗೆ ಬರುತ್ತಾನೆ..ಈ ಹಿನ್ನಲೆಯಲ್ಲಿ ದ್ವಿತೀಯಾರ್ಧ ಚಿತ್ರವು ಮೊದಲಿಗಿಂತ ಬಿಗಿಯಾಗಿ ನಡೆದು ಹೋದ ಘಟನೆಗಳ ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತದೆ..ವಿಜಯ್ ಸೇತುಪತಿ (ಸಂಧಾನಮ್)ಡ್ರಗಿಸ್ಟ್ ನ ಪಾತ್ರದ ಪ್ರವೇಶವು ಅಬ್ಬಬ್ಬ ! ಇಡೀ ಚಿತ್ರವನ್ನು ರಕ್ತಚರಿತ್ರೆ ಮಾಡಿಬಿಡುತ್ತದೆ.
ಕಮಲಹಾಸನ್ ಇಲ್ಲಿ ಪ್ರಾರಂಭಕ್ಕೆ ಅತಿಥಿ ನಟರಂತೆ ಕಾಣುತ್ತಾರೆ. ಈ ತ್ರಿಕೋನ ದಲ್ಲಿ ಕಮಲ್,ವಿಜಯ್ ಸೇತುಪತಿ,ಫಾಸಿಲ್,.ಒಬ್ಬೊರಿಗೊಬ್ಬರು ಸೆಡ್ಡು ಹೊಡೆದಂತೆ ಅಭಿನಯಿಸಿದ್ದಾರೆ..ಸಹಜವಾಗಿ ಕಮರ್ಷಿಯಲ್ ಚಲನ ಚಿತ್ರಗಳಲ್ಲಿ star ಸುತ್ತವೇ ಚಿತ್ರಕತೆ ಗಿರಕಿ ಹೊಡೆಯುತ್ತದೆ. ಆದರೆ ಪ್ರಶಂಸನಾರ್ಹ ಏನೆಂದರೆ,ಕಮಲ್ ಹಾಸನ್ ಇತರ ಸಹ ಕಲಾವಿದರನ್ನು ಸೆಣಸಲು ಬಿಟ್ಟು,.ತಾವು ಕತೆಯಲ್ಲಿನ ಪಾತ್ರವಾಗಿ ಮಿಳಿತವಾಗಿರುವುದು..ಚಿತ್ರದ ಪೈಟ್ ಗಳಲ್ಲಿನ ಬಂದೂಕದ ಗುಂಡಿನ ಮೊರೆತ ಪ್ರೇಕ್ಷಕರ ಹೃದಯದ ಬಡಿತ ಹೆಚ್ಚಿಸುತ್ತದೆ. ಕತೆಯ ಚಲನೆಯಲಿ ಅಮರ್ ಮತ್ತು ಆತನ ಗೆಳತಿಯ ಪ್ರೇಮ ದುರಂತ ಅಷ್ಟೇನು ಹೆಚ್ಚು ಪರಿಣಾಮ ಅನಿಸುವುದಿಲ್ಲವೇನೊ?! ಡ್ರಗ್ಸ್ ಮಾಫಿಯದ ಹೋರಾಟದ ಅಂತ್ಯಕ್ಕೆ ಬರುವಾಗಲೇ ಡ್ರಗ್ ಪೆಡ್ಲರ್ ರೋಲೆಕ್ಸ್ (ಸೂರ್ಯ) ಮಾದಕ ಸರಬರಾಜದ ರಾಜ ಪ್ರತ್ಯಕ್ಷನಾಗುತ್ತಾನೆ. ಅಲ್ಲಿಗೆ ಮುಗಿಯಿತಾ ವಿಕ್ರಮ ಸಾಧನೆ? ಚಿತ್ರ ನೀವೇ ನೋಡಬೇಕು. ನಿರ್ದೇಶಕ ಲೋಕೇಶ್ ಕನಕರಾಜ್ ನಿಜಕ್ಕೂ ಅಧ್ಭುತ ಪ್ರತಿಭಾವಂತ ನಿರ್ದೇಶಕ. ಇತ್ತೀಚೆಗೆ ಬಿಡುಗಡೆಯಾದ ತೆಲುಗಿನ ಪುಷ್ಪ,ಕನ್ನಡದ ಕೆ.ಜಿ.ಎಫ್.ಚಿತ್ರಗಳ ಯಶಸ್ಸಿನ ಹೋಲಿಕೆಯಲಿ ಕಳೆದುಹೋಗುತ್ತಿದ್ದ ತಮಿಳು ಚಿತ್ರರಂಗವನ್ನು ಯಶಸ್ಸಿನ ಎತ್ತರದ ಕಮಾನಿನಂತೆ ನಿಲ್ಲಿಸಿದ್ದಾರೆ,ನಿರ್ದೇಶಕರು. ಸಂಗೀತ(ಅನಿರುದ್ದ ರವಿಚಂದರ್) ಛಾಯಾಗ್ರಹಣ(ಗಿರೀಶ್ ಗಂಗಾಧರನ್)ಕಲಾವಿದರೆಲ್ಲರ ಅಭಿನಯ ಕಮಲ್ ಕಮಾಲ್ ನೊಂದಿಗೆ “ವಿಕ್ರಮ್” ವಿಶ್ವ ಪರದೆಯಲ್ಲಿ ವಿಜೃಂಭಿಸಿದ್ದಾನೆ.