ರೇಟಿಂಗ್; 3.5/5
ಈ ಹಿಂದೆ ಡಿಫರೆಂಟ್ ಕಂಟೆ0ಟ್ಗಳ ಸಿನಿಮಾ ನಿರ್ದೇಶಿಸಿದ್ದ ರವಿ ಬಸ್ರೂರು, ಇದೀಗ ಯಕ್ಷಗಾನ ಪ್ರಸಂಗವನ್ನು ತೆರೆಮೇಲೆ `ವೀರ ಚಂದ್ರಹಾಸ’ ಸಿನಿಮಾ ರೂಪದಲ್ಲಿ ಅದ್ದೂರಿಯಾಗಿ ತಂದಿದ್ದಾರೆ. ಹಾಗಾದರೆ, ಈ ಸಿನಿಮಾ ಹೇಗಿದೆ? ರವಿ ಕಂಡ ಕನಸನ್ನು ಪ್ರೇಕ್ಷಕರು ಒಪ್ಪಿದ್ರಾ? ವಿಭಿನ್ನ ಪ್ರಯತ್ನ ಹೇಗೆ ಮೂಡಿ ಬಂದಿದೆ? ಚಿತ್ರ ವಿಮರ್ಶೆಯ ಮೂಲಕ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಚಿತ್ರದ ಕಥೆ ಝಲಕ್ ಹೇಳುವುದಾದರೆ.. ಅನಾಥನಾದ ಬಾಲಕ ಚಂದ್ರಹಾಸನು ಭವಿಷ್ಯದಲ್ಲಿ ರಾಜನಾಗುತ್ತಾನೆ ಎಂಬ ವಿಚಾರ ಮಂತ್ರಿ ದುಷ್ಟಬುದ್ಧಿಗೆ ತಿಳಿಯುತ್ತದೆ. ಕುಂತಲ ಸಾಮ್ರಾಜ್ಯದ ಯುವರಾಣಿಯನ್ನು ವರಿಸಿ, ಬಳಿಕ ಆ ಸಾಮ್ರಾಜ್ಯಕ್ಕೆ ಚಂದ್ರಹಾಸ ರಾಜನಾಗುತ್ತಾನೆ ಎಂಬ ಭವಿಷ್ಯವಾಣಿಯನ್ನು ಕೇಳಿ ಕ್ರೋಧಗೊಳ್ಳುವ ಮಂತ್ರಿ ದುಷ್ಟಬುದ್ಧಿ, ಕಟುಕರಿಗೆ ಚಂದ್ರಹಾಸನನ್ನು ಕೊಲ್ಲಲು ಹೇಳುತ್ತಾನೆ. ಆದರೆ ಚಂದ್ರಹಾಸ ಸಾಯುವುದಿಲ್ಲ. ಆತ ರಾಜಕುಟುಂಬದಲ್ಲಿ ಬೆಳೆದು 20 ವರ್ಷಗಳ ಬಳಿಕ ಮತ್ತೆ ದುಷ್ಟಬುದ್ಧಿಗೆ ಎದುರಾಗುತ್ತಾನೆ. ಇದು ದುಷ್ಟಬುದ್ಧಿಗೆ ಮತ್ತೆ ತಳಮಳ ಉಂಟು ಮಾಡುತ್ತದೆ. ತನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದ್ದನ್ನು ಅರಿಯುತ್ತಾನೆ. ತನ್ನ ಹೆಸರನ್ನೇ ದುಷ್ಟಬುದ್ಧಿ ಎಂದು ಇಟ್ಟುಕೊಂಡಿರುವ ಈ ಕ್ರೂರಿ ಮುಂದೆ ಯಾವೆಲ್ಲ ತಂತ್ರ ರೂಪಿಸಿತ್ತಾನೆ ಅನ್ನುವುದೇ ಚಿತ್ರದ ಇಂಟ್ರೆಸ್ಟಿ0ಗ್ ಪಾರ್ಟ್. ವಿಧಿಯ ಬರಹವನ್ನೇ ತಿರುಚಲು ಹೊರಟ ದುಷ್ಟನ ಬುದ್ಧಿ climaxನಲ್ಲಿ ಸರಿ ಹೋಗುತ್ತಾ.. ಅನ್ನೋದನ್ನು ಸಿನಿಮಾ ನೋಡಿಯೇ ತಿಳಿಯಬೇಕು.
`ಚಂದ್ರಹಾಸ’ನ ಕಥೆ ಈಗಾಗಲೇ ಯಕ್ಷಗಾನ ರೂಪದಲ್ಲಿ ಸಾವಿರಾರು ಪ್ರಸರ್ಶನ ಕಂಡಿದೆ. ಈ ಜನಪ್ರಿಯ ಯಕ್ಷಗಾನ ಪ್ರಸಂಗವನ್ನು ಕೈಗೆತ್ತಿಕೊಂಡು, ಅದಕ್ಕೆ ಸಿನಿಮಾ ರೂಪವನ್ನು ನೀಡಿದ್ದಾರೆ ರವಿ ಬಸ್ರೂರು. ತೆರೆಮೇಲೆ ಬರುವ ಕಲಾವಿದರೆಲ್ಲರೂ ಯಕ್ಷಗಾನ ಶೈಲಿಯಲ್ಲೇ ಮಾತನಾಡುತ್ತಾರೆ. ವೇಷಭೂಷಣ ಎಲ್ಲವೂ ಅದೇ ರೀತಿಯಲ್ಲಿ ಇದೆ. ಜೊತೆಗೆ ಅರಮನೆಗಳನ್ನು ಗ್ರಾಫಿಕ್ಸ್ ಮೂಲಕ ತೋರಿಸಿರುವ ರವಿ ಬಸ್ರೂರು, ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವವನ್ನು ನೀಡುವ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಇಂಟರ್ವೆಲ್ ಬ್ಲಾಕ್ನಲ್ಲಿ ಅಚ್ಚರಿ ಮೂಡಿಸುವ ಗ್ರಾಫಿಕ್ ಸಿನಿಮಾವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ. ಚಂದ್ರಹಾಸ, ದುಷ್ಟಬುದ್ಧಿ ಪಾತ್ರಗಳು ತೆರೆಮೇಲೆ ಬಂದು ಹೊಸ ಲೋಕವನ್ನೇ ಸೃಷ್ಟಿಸುತ್ತವೆ.
ಕರಾವಳಿ ಭಾಗದ ಜನರಿಗೆ ಸಿನಿಮಾ ರೂಪದ ಯಕ್ಷಗಾನ ಪ್ರಸಂಗ `ವೀರ ಚಂದ್ರಹಾಸ’ ರೋಮಾಂಚನ ಗೊಳಿಸಿದರೆ, ಯಕ್ಷಗಾನ ಪ್ರಸಂಗಗಳನ್ನು ಹೆಚ್ಚಾಗಿ ನೋಡದೇ ಇರುವವರಿಗೂ ಕೂಡ ಇದು ಖಂಡಿತ ಹೊಸ ಅನುಭವವನ್ನು ನೀಡುತ್ತದೆ. ಯಕ್ಷಗಾನದ ಬಗ್ಗೆ ಆಸಕ್ತಿಯೇ ಇಲ್ಲದವರಿಗೂ ಕೂಡ `ಚಂದ್ರಹಾಸ’ ಇಷ್ಟವಾಗುತ್ತಾನೆ, ಕಾರಣ ಇಡೀ ಥಿಯೇಟರ್ ವೈಬ್ರೇಟ್ ಮಾಡಿರುವ ರವಿ ತಮ್ಮ ಹಿನ್ನೆಲೆ ಸಂಗೀತಕ್ಕೆ ಎಂಥವರೂ ಮನಸೋಲುವಂತೆ ಮಾಡಿದ್ದಾರೆ. ಈ ಸಿನೆಮಾದಲ್ಲಿ ಇರುವ ಎಪ್ಪತ್ತು ಯಕ್ಷ ಪದ್ಯಗಳನ್ನು ಬರೆದಿರುವ ಪ್ರಸಂಗಕರ್ತ, ಯಕ್ಷಕವಿ ಪ್ರಸಾದ್ ಮೊಗೆಬೆಟ್ಟು ಅವರ ಸಾಹಿತ್ಯಕ್ಕೆ ಮೆಚ್ಚಲೇ ಬೇಕು. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ, ಸತೀಶ್ ಶೆಟ್ಟಿ ಪಟ್ಲ, ಗಣೇಶ್ ಆಚಾರ್ಯ ಬಿಲ್ಲಾಡಿ, ಚಿನ್ಮಯ್ ಭಟ್ ಕಲ್ಲಡ್ಕ ಅವರ ಸುಸ್ವರದ ಭಾಗವತಿಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಂಡೆ, ಮದ್ದಲೆಯಲ್ಲಿ ಶ್ರಮಿಸಿದ ಹಿಮ್ಮೇಳ ಕಲಾವಿದರೂ ಶ್ಲಾಘನೀಯ.
ಯಕ್ಷಗಾನದಲ್ಲಿ ಪದ್ಯಗಳು, ರಂಗ ಗೀತೆಗಳಿಗೆ ವಿಶೇಷವಾದ ಸ್ಥಾನ ಇದೆ. ಅದನ್ನು ಅರಿತಿರುವ ರವಿ ಬಸ್ರೂರು, ಸಿನಿಮಾಗೆ ಆ ವಿಚಾರಲ್ಲಿ ಬೇಕಾದ ಟ್ರೀಟ್ಮೆಂಟ್ ನೀಡಿದ್ದಾರೆ. ಮಧ್ಯೆ ಮಧ್ಯೆ ಬರುವ ಒಂದಷ್ಟು ಕಾಮಿಡಿಗಳು ರಂಗಮೇಲೆ ವರ್ಕ್ಔಟ್ ಆದಷ್ಟು ಸಿನಿಮಾದಲ್ಲಿ ಆಗಿಲ್ಲ. ಅಲ್ಲದೆ, ಸಿನಿಮಾದ ಅವಧಿ ಸ್ವಲ್ಪ ಕಡಿಮೆ ಮಾಡುವ ಅವಕಾಶ ಸಾಕಷ್ಟಿತ್ತು. ಅತಿಥಿ ಪಾತ್ರಗಳಲ್ಲಿ ಬರುವ ಶಿವರಾಜ್ಕುಮಾರ್, ಗರುಡ ರಾಮ್, ಚಂದನ್ ಶೆಟ್ಟಿ, ಪುನೀತ್ ರುದ್ರನಾಗ್ ಸಿನೆಮಾದ ಪ್ರಚಾರಕರಾಗಿ ಅಷ್ಟೇ ಕಾಣಿಸಿಕೊಳ್ಳುತ್ತಾರೆ ಹೊರತು ಅವರಿಗೆ ಸಿನೆಮಾದಲ್ಲಿ ಹೆಚ್ಚಿನ screen ಸ್ಪೇಸ್ ಕೂಡ ಇಲ್ಲ, ಕಥೆಗೂ ಅವರು ಬೇಕೆಂದಿರಲಿಲ್ಲ. ಆದರೆ, ಭಾಗ-2ರಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶ ಇರಬಹುದಾ? ಕಾದು ನೋಡಬೇಕಿದೆ.
ಚಂದ್ರಹಾಸನ ಪಾತ್ರ ಮಾಡಿರುವ ಶಿಥಿಲ್ ಶೆಟ್ಟಿ, ದುಷ್ಟ ಬುದ್ಧಿಯ ಜೊತೆ ನಟನೆಯಲ್ಲಿ ಇನ್ನಷ್ಟು ಪೈಪೋಟಿ ನೀಡಬೇಕಿತ್ತು. ದುಷ್ಟಬುದ್ಧಿ ಪಾತ್ರ ನಿರ್ವಹಿಸಿರುವ ನಟ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಇಡೀ ಸಿನಿಮಾದ ಜೀವಾಳ. ಅವರ ದೇಹಭಾಷೆ, ನಗು, ಸಂಭಾಷಣೆ ಹೇಳುವ ಶೈಲಿ, ಭಾವಪೂರ್ಣ ಅಭಿನಯ ಎಲ್ಲವೂ ಚಂದ್ರಹಾಸನನ್ನು ರಂಗಾಗಿಸಿದೆ. ಜೊತೆಗೆ ಮದನ ಪಾತ್ರ ಮಾಡಿರುವ ಉದಯ ಹೆಗಡೆ ಕಾಡಬಾಳ್ ಅವರ ಕಾಮಿಡಿ ಇಷ್ಟವಾಗುತ್ತದೆ. ವಿಷಯೆ ಪಾತ್ರ ನಿರ್ವಹಿಸಿದ ನಾಗಶ್ರೀ, ವಿರಸಿಂಹನ ಪಾತ್ರ ನಿರ್ವಹಿಸಿದ ನವೀನ್ ಶೆಟ್ಟಿ ಐರ್ಬೈಲ್, ಹಾಸ್ಯ ಕಲಾವಿದರಾದ ರವೀಂದ್ರ ದೇವಾಡಿಗ ಕಮಲಶಿಲೆ, ಶ್ರೀಧರ್ ಭಟ್ ಕಾಸರಗೋಡ್, ಶೇಖರ್ ಶೆಟ್ಟಿ ಯಳಬೇರು ಹಾಗೂ ಮತ್ತಿತರರ ನಟನೆ ಸ್ತುತ್ಯಾರ್ಹ. ಇನ್ನುಳಿದಂತೆ, ಇಡೀ ಸಿನಿಮಾದಲ್ಲಿ ಯಕ್ಷಗಾನ ಕಲಾವಿದರನ್ನೇ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗಿದ್ದು, ಒಂದು ಯಕ್ಷಲೋಕವನ್ನೆ ಸೃಷ್ಟಿಸಿದ್ದಾರೆ.
ತಾಂತ್ರಿಕವಾಗಿ ಹೇಳುವುದಾದರೆ..ಕೆಲವು ಸನ್ನಿವೇಶಗಳಲ್ಲಿ ಫೂಟೇಜ್ ಟು ಫೂಟೇಜ್ ಕಲರ್ ಮ್ಯಾಚ್ ಇಲ್ಲ. ಎಡಿಟಿಂಗ್ ಕಟ್ಟಿಂಗ್ ಹೆಚ್ಚಾದಂತೆ ಕಾಣಿಸುತ್ತದೆ, ಮೂಮೆಂಟ್ ಪ್ರೇಮಿಂಗ್ಗಳನ್ನೇ ಹೆಚ್ಚಿನ ಸನ್ನಿವೇಶಗಳಲ್ಲಿ ಬಳಸಿಕೊಂಡಿರುವುದರಿ0ದ ಪ್ರೇಕ್ಷಕರ ಕಣ್ಣಿಗೆ ಅಲ್ಲಲ್ಲಿ ತ್ರಾಸಾಗುವಂತಿದೆ. ಡೈಲಾಗ್ ಡೆಲಿವರಿ ಸಂದರ್ಭಗಳಲ್ಲಿ ಪ್ರೇಕ್ಷಕರು ನಟರ ಭಾವನೆಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಮುನ್ನವೇ ಪ್ರೇಮ್ ಬದಲಾಗುವುದು ಹೆಚ್ಚಿನ ಕಡೆಗಳಲ್ಲಿವೆ. ಲಿಪ್ ಸಿಂಕ್ ಆಗದೆ ಇರುವುದು ಸುಮಾರು ಕಡೆಗಳಲ್ಲಿ ಸಾಮಾನ್ಯನೂ ಗ್ರಹಿಸುವಂತೆ ಇದೆ. ಈ ಮಿಸ್ ಮ್ಯಾಚಿಂಗ್ ಎಲ್ಲಾ ಚಿತ್ರಮಂದಿರಗಳಲ್ಲೂ ಇದೆಯಾ, ಅಥವಾ ಕೆಲವು ಚಿತ್ರಮಂದಿರಗಳ ಸಮಸ್ಯೆಯಾ? ಗೊತ್ತಿಲ್ಲ. ಒಟ್ಟಿನಲ್ಲಿ, ಒಂದಿಷ್ಟು ತಾಂತ್ರಿಕ ವಿಷಯಗಳಲ್ಲಿ ರವಿಯವರು ಇನ್ನಷ್ಟು ಎಚ್ಚರ ವಹಿಸಬೇಕಿತ್ತೇನೋ. ಇನ್ನು, ಇಂಥಹ ಅಪರೂಪದ ಸಾಹಸಕ್ಕೆ ಸಾಥ್ ನೀಡಿದ ನಿರ್ಮಾಪಕ ಎನ್.ಎಸ್. ರಾಜ್ಕುಮಾರ್ ನಿಜಕ್ಕೂ ಅಭಿನಂದನಾರ್ಹರು.
ಒಟ್ಟಿನಲ್ಲಿ ಯಕ್ಷಗಾನ ಕಲೆಯನ್ನು ಗೌರವಿಸುವವರಿಗೆ, ಅಭಿಮಾನಿಸುವವರಿಗೆ, ಆರಾಧಿಸುವವರಿಗೆ ರವಿ ಬಸ್ರೂರು `ವೀರ ಚಂದ್ರಹಾಸ’ನ ಮೂಲಕ ಒಂದು ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಸಿನಿಮಾ ಮುಗಿದ ಮೇಲೂ, ಭಾಗವತಿಕೆ ಕೇಳುತ್ತಲೇ ಇರುತ್ತದೆ, ಅಲ್ಲಿಗೆ ಇಡೀ ಚಿತ್ರತಂಡ ಪ್ರಯತ್ನ ಸಾರ್ಥಕವಾಗಿದೆ. ಈ ನಿಟ್ಟಿನಲ್ಲಿ. ಯಕ್ಷಗಾನವನ್ನು ವಿಶ್ವಗಾನವನ್ನಾಗಿಸುವ ರವಿಯವರ ದಂಡಯಾತ್ರೆ ಮುಂದುವರಿಯಲಿ.