ಕನ್ನಡ ಚಿತ್ರರಂಗಕ್ಕೆ ದುಃಖದ ಸುದ್ದಿ. ‘ತಿಥಿ’ ಸಿನಿಮಾದ ಮೂಲಕ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದ ನಟ ಚನ್ನೇಗೌಡ ಅಂದರೆ ನಮ್ಮ ಗಡ್ಡಪ್ಪ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸು.

ಮಂಡ್ಯ ಜಿಲ್ಲೆಯ ನೊದೆ ಕೊಪ್ಪಲು ಗ್ರಾಮದವರು ಆಗಿರುವ ಚನ್ನೇಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪಾರ್ಶ್ವ ವಾಯು ಬಂದಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜೊತೆಗೆ ಹೃದಯ ಸಮಸ್ಯೆ, ಉಬ್ಬಸ, ಶ್ರವಣದೋಷ ಮತ್ತು ಇತರ ವಯೋಸಹಜ ಅಸೌಖ್ಯಗಳು ಕಾಡುತ್ತಿವೆ. ಚಿಕಿತ್ಸೆಗೂ ಹಣದ ಅಭಾವ ಎದುರಿಸಬೇಕಾದ ಪರಿಸ್ಥಿತಿ ಅವರದು.
2015ರಲ್ಲಿ ಬಿಡುಗಡೆಯಾದ ‘ತಿಥಿ’ ಚಿತ್ರದಲ್ಲಿ ಅವರು ನಿರ್ವಹಿಸಿದ ಗಡ್ಡಪ್ಪ ಪಾತ್ರವು ಅವರನ್ನು ಮನೆಮಾತು ಮಾಡಿತು. ಸಿನಿಮಾದಲ್ಲಿ ಜೀವಂತವಾಗಿ ನಟಿಸಿದ್ದ ಗಡ್ಡಪ್ಪ ಅವರ ಪಾತ್ರ, ಸಂಭಾಷಣೆಗಳು ಮತ್ತು ಸರಳ ಶೈಲಿ ಪ್ರೇಕ್ಷಕರ ಮನ ಗೆದ್ದಿತ್ತು. ಆ ಪಾತ್ರದ ಯಶಸ್ಸಿನಿಂದಾಗಿ, ಚನ್ನೇಗೌಡರನ್ನು ಎಲ್ಲರೂ ಗಡ್ಡಪ್ಪ ಎಂದೇ ಕರೆಯಲು ಆರಂಭಿಸಿದ್ದರು.
‘ತಿಥಿ’ ಸಿನಿಮಾದ ಯಶಸ್ಸಿನ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಆರ್ಥಿಕವಾಗಿ ಸ್ಥಿರತೆ ಕಂಡುಕೊಳ್ಳಲಿಲ್ಲ. ಆದರೂ ಅವರ ನೈಸರ್ಗಿಕ ಅಭಿನಯವು ಕನ್ನಡ ಚಿತ್ರರಂಗದಲ್ಲಿ ಸದಾ ನೆನಪಾಗುವುದು.
ಇಂದು (ನವೆಂಬರ್ 12) ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಗಡ್ಡಪ್ಪ ಅವರ ನಿಧನದಿಂದ ಕನ್ನಡ ಚಿತ್ರರಂಗ ಮತ್ತೊಂದು ನೈಸರ್ಗಿಕ ನಟನನ್ನು ಕಳೆದುಕೊಂಡಂತಾಗಿದೆ.
