ಬಣ್ಣದ ಲೋಕದ ಮಾಯೆಗೆ ಮರುಳಾಗದವರು ಬಹಳ ಕಡಿಮೆ. ತಾವು ಸಹ ಬಣ್ಣ ಹಚ್ಚಿ ಬೆಳ್ಳಿತೆರೆಯ ಮೇಲೆ ಮಿಂಚ ಬೇಕು ಅಂತ ಕನಸು ಕಾಣುವ ಯುವ ಜನರ ಸಂಖ್ಯೆ ಅಗಾದವಾಗಿದೆ.
ಸಿನಿಮಾತಾರೆಯಾಗಬೇಕು ಅಂತ ಕನಸಿನ ಹೊರೆ ಹೊತ್ತು ಬಣ್ಣದ ಲೋಕಕ್ಕೆ ಬರುವವರು ಸಾವಿರರು. ಆದರೆ, ಕಲೆ ಕೆಲವರನ್ನಷ್ಟೆ ಆರಿಸಿಕೊಳ್ಳುತ್ತದೆ. ಆಸೆಪಟ್ಟವರನ್ನೆಲ್ಲ ತನ್ನತ್ತ ಸೆಳೆದುಕೊಳ್ಳುವುದಿಲ್ಲ. ಕಲೆಯ ಬಗ್ಗೆ ಗೌರವ ಶ್ರದ್ದೆ ಹೊಂದಿದ ಕಲಾವಿದರಷ್ಟೆ ಉನ್ನತ ಸ್ಥಾನಕ್ಕೇರಿ ಅಪಾರ ಜನರ ಪ್ರೀತಿ, ಕೀರ್ತಿ ಗಳಿಸುತ್ತಾರೆ.
ಸಿನಿಮಾ ರಂಗದಲ್ಲಿ ಆರಂಭದಿಂದಲೂ ಲಿಂಗ ತಾರತಮ್ಯವಿದೆ ಅನ್ನೋ ಆರೋಪವಿದೆ. ನಾಯಕನಟರು ತಮ್ಮ ವಿವಾಹದ ನಂತರವೂ ಹೀರೋ ಪಾತ್ರ ಮಾಡುತ್ತಾರೆ. ಆದರೆ, ಹೀರೋಯಿನ್ಗಳು ಮದುವೆಯಾದ ನಂತರ ಸಿನಿಮಾದಲ್ಲಿ ಅವಕಾಶಗಳು ಸಿಗದೆ ತೆರೆಮರೆಗೆ ಸರಿಯುತ್ತಾರೆ. ಇಂಥ ಭೇದಭಾವ ಸರಿಯಲ್ಲ. ಮಹಿಳೆಯರಿಗೂ ಸಮಾನತೆ ಬೇಕು ಅನ್ನೋ ಒತ್ತಾಯ ಬಹಳ ಹಿಂದಿನಿಂದಲೂ ಇದೆ. ಹೀರೋ ಎಷ್ಟೇ ವಯಸ್ಸಾದರೂ ನಾಯಕನಟನಾಗೇ ಕಾಣಿಸಿಕೊಳ್ಳುತ್ತಾರೆ. ಆದರೆ, ಹೀರೋಯಿನ್ಗೆ ೩೫ರ ನಂತರ ನಾಯಕಿಯಾಗುವ ಅವಕಾಶವೇ ಚಿತ್ರರಂಗದಲ್ಲಿಲ್ಲ ಅನ್ನೋ ಅಸಮಾಧಾನವೂ ಮಹಿಳಾವಾದಿಗಳಲ್ಲಿದೆ. ನಟಿಯರು ವಿವಾಹದ ನಂತರ ಗಂಡನ ಮತ್ತು ಗಂಡನ ಮನೆಯವರಿಂದ ಪ್ರೋತ್ಸಾಹ ಸಿಗದಿದ್ದರಿಂದಲೋ ಸಿನಿಮಾ ರಂಗಕ್ಕೆ ತಾವೇ ಗುಡ್ಬೈ ಹೇಳಿಬಿಡುತ್ತಾರೆ.
ದೀಪಿಕಾ ಪಡು ಕೋಣೆ:
ಈಗಾಗಲೇ ಕೆಲ ನಟಿಯರು ಮದುವೆಯಾಗಿ ತೆರೆಮರೆಗೆ ಸರಿದರೂ, ಮತ್ತೆ ತೆರೆಮೇಲೆ ಮಿಂಚಲು ಪ್ರಯತ್ನಿಸುತ್ತಿದ್ದಾರೆ. ಅವರುಗಳಲ್ಲಿ ಕನ್ನಡತಿ ದೀಪಿಕಾ ಪಡುಕೊಣೆ ಮುಂಚೂಣಿಯಲ್ಲಿದ್ದಾರೆ. ಬಾಲಿವುಡ್ ನಟ ರಣವೀರ್ಸಿಂಗ್ರನ್ನು ವಿವಾಹವಾದ ನಂತರವೂ ಷಾರೂಖ್ಖಾನ್ನಂತಹ ದಿಗ್ಗಜ ನಟರೊಂದಿಗೆ ಪಠಾಣ್, ಜವಾನ್ ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸುತ್ತಿದ್ದಾರೆ. ಮುಂದಿನ ೨೦೨೪ರಲ್ಲೂ ದೀಪಿಕಾ ಪಡುಕೋಣೆ ‘ಕಲ್ಕಿ ೨೮೯೮ಎಡಿ’ ‘ಫೈಟರ್’ ಹಾಗೂ ‘ಸಿಂಗಮ್ ಎಗೇನ್’ ನಂತಹ ಬಿಗ್ ಬಜೆಟ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಕಲ್ಕಿ ೨೮೯೮ಎಡಿ’ ಯಲ್ಲಿ ದಿಗ್ಗಜ ನಟರಾದ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ರೊಂದಿಗೆ ಅಭಿನಯಿಸುತ್ತಿದ್ದಾರೆ. ‘ಫೈಟರ್’ ಚಿತ್ರದಲ್ಲಿ ಅನಿಲ್ ಕಪೂರ್, ಹೃತಿಕ್ ರೋಷನ್ ಜೊತೆ ನಟಿಸುತ್ತಿದ್ದಾರೆ. ‘ಸಿಂಗಮ್ ಎಗೇನ್’ ಚಿತ್ರದಲ್ಲಿ ಆಂಗ್ರಿ ವುಮನ್ ಶಕ್ತಿಶೆಟ್ಟಿ ಪಾತ್ರ ಮಾಡುತ್ತಿದ್ದಾರೆ. ಯಾವ ಹೀರೋಗಳಿಗೂ ಕಡಿಮೆ ಇಲ್ಲದಂತೆ ಫೈಟಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ನಿರ್ಮಿಸಬೇಕೆಂದಿರುವ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಮಾದರಿಯ ಚಿತ್ರ “ಶಕುಂತಲೆ” ಸೆಟ್ಟೇರಿದರೆ, ದೀಪಿಕಾ ಪಡುಕೋಣೆ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುವ ಸಾಧ್ಯತೆ ಇದೆ.
ಅಲಿಯಾ ಭಟ್:
ಮತ್ತೊಬ್ಬ ಬಾಲಿವುಡ್ ನಟಿ ಆಲಿಯಾ ಭಟ್ ಸುಪ್ರಸಿದ್ದ ನಟ ರಿಷಿಕಪೂರ್ರನ್ನು ವಿವಾಹದ ನಂತರವೂ ಚಿತ್ರಗಳಲ್ಲಿ ಅಭಿನಯಿಸುತ್ತಾ ಬೇಡಿಕೆಯ ನಟಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಮಹೇಶ್ ಭಟ್ ಮತ್ತು ಸೋನಿ ರಾಜ್ಧನ್ ಪುತ್ರಿಯಾದ ಆಲಿಯಾ ಭಟ್ ಕಳೆದ ವರ್ಷ ಬಿಡುಗಡೆಯಾದ ‘ಗಂಗೂಬಾಯಿ ಕಾಥೇವಾಡಿ’ ಚಿತ್ರದಲ್ಲಿನ ಗಂಗೂಬಾಯಿ ಎಂಬ ವೇಶ್ಯೆಯ ಪಾತ್ರಕ್ಕೆ ೨೦೨೨ರ ಸಾಲಿನ ಉತ್ತಮ ನಟಿ ಎಂಬ ರಾಷ್ಟç ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಂದು ಮಗುವಿನ ತಾಯಿ ಆಗಿರುವ ಆಲಿಯಾ ಭಟ್ ಈಗಲೂ ಅತೀ ಬೇಡಿಕೆಯ ನಟಿಯಾಗಿ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ಸಮಂತ ರುಥ್ಪ್ರಭು:
೨೦೧೦ರಲ್ಲಿ ತೆಲುಗಿನ ‘ಯೇ ಮಾಯಾ ಚೆಸುವೇ’ ಚಿತ್ರದ ಮೂಲಕ ಬೆಳ್ಳಿಪರದೆಗೆ ಪಾದರ್ಪಾಣೆ ಮಾಡಿದ ಸಮಂತಾ ರುಥ್ಪ್ರಭು ಮೊದಲ ಚಿತ್ರದಲ್ಲಿನ ಬೋಲ್ಡ್ ಪಾತ್ರದಿಂದಲೇ ಸಿನಿಪ್ರಿಯರಿಂದ ಅಪಾರ ಪ್ರಶಂಸೆೆಗಳನ್ನು ಗಳಿಸಿದರು. ಮುಂದೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾದರು.೨೦೧೭ರಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಾಯಕನಟ ನಾಗಚೈತ್ಯನರನ್ನು ವಿವಾಹವಾದರು. ವಿವಾಹದ ಮೇಲು ಸಹ ತೆಲುಗು, ತಮಿಳು ಚಿತ್ರಗಳಲ್ಲಿ ಹಾಗೂ ಹಿಂದಿ ವೆಬ್ ಸೀರಿಸ್ಗಳಲ್ಲಿ ತಮ್ಮ ಅಮೋಘ ಅಭಿನಯದದಿಂದ ಜನಪ್ರಿಯ ನಾಯಕನಟಿಯಾಗಿದ್ದಾರೆ. ಬೇಡಿಕೆಯ ನಟಿಯಾಗಿರುವ ಸಮಂತಾ ಈಗ ಬಾಲಿವುಡ್ ನತ್ತ ಗಮನ ಹರಿಸುತ್ತಿದ್ದಾರೆ.
ನಯನತಾರಾ :
‘ಲೇಡಿ ಸೂಪರ್ ಸ್ಟಾರ್’ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ನಯನತಾರಾ, ೨೦೦೩ರಲ್ಲಿ ‘ಮನಸ್ಸಿನಕ್ಕರೆ’ ಎಂಬ ಮಲಯಾಳಂ ಚಿಲನಚಿತ್ರದಿಂದ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದರು.
ಮನೋಜ್ಞ ನಟನೆಯಿಂದ ಸಿನಿಪ್ರಿಯರ ಮನಸೂರೆಗೊಂಡ ನಯನತಾರಾ ತಮಿಳು ಚಲನಚಿತ್ರರಂಗದಲ್ಲಿ ಲೇಡಿ ‘ಸೂಪರ್ ಸ್ಟಾರ್’ ಎಂಬ ಬಿರುದು ಪಡೆದುಕೊಂಡರು. ೨೦೨೨ರಲ್ಲಿ ತಮಿಳಿನ ಖ್ಯಾತ ಚಲನಚಿತ್ರ ನಿರ್ದೇಶಕರಾಗಿರುವ ವಿಘ್ನೇಶ್ ಶಿವನ್ ಅವರನ್ನು ವಿವಾಹದ ನಂತರವು ಬಹುಬೇಡಿಕೆಯ ನಾಯಕನಟಿಯಾಗಿರುವ ನಯನತಾರಾರವರು ಈ ವರ್ಷದ ಅತ್ಯಂತ್ಯ ಯಶಸ್ವಿ ಸಿನಿಮಾ ಆಗಿರುವ ಷಾರೂಖ್ಖಾನ್ ಅಭಿನಯದ ‘ಜವಾನ್’ ಹಿಂದಿ ಚಿತ್ರದಲ್ಲಿ ಆಭಿನಯಿಸುವುದರ ಮೂಲಕ ಬಾಲಿವುಡ್ನಲ್ಲು ತಮ್ಮ ಪ್ರತಿಭೆ ಛಾಪನ್ನು ಮೂಡಿಸಿದ್ದಾರೆ. ಇವರು ಸಹ ಗ್ಲಾಮರಸ್ ಪಾತ್ರಗಳ ಜೊತೆ ಡಿ-ಗ್ಲಾಮರಸ್ ಪಾತ್ರಗಳಲ್ಲು ನಟಿಸಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ೨೦೧೦ರಲ್ಲಿ ಉಪೇಂದ್ರ ನಿರ್ದೇಶನದ ಸೂಪರ್ ಹಿಟ್ ಕನ್ನಡ ಚಿತ್ರ ‘ಸೂಪರ್’ ನಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಕಿಯಾರಾ ಅಡ್ವಾಣಿ:
೨೦೧೪ರಲ್ಲಿ ‘ಪಗ್ಲಿ’ ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕಿಯಾರಾ ಅಡ್ವಾಣಿ ‘ ಲಸ್ಟ್ ಸ್ಟೋರೀಸ್’ ಎಂಬ ಚಿತ್ರದಲ್ಲಿ ನಿರ್ವಹಿಸಿದ ಪಾತ್ರದಿಂದ ಸಿನಿರಸಿಕರ ಮನಗೆದ್ದು
ಜನಪ್ರಿಯ ಬೇಡಿಕೆಯ ನಟಿಯಾದರು. ಇವರು ೨೦೨೩ರಲ್ಲಿ ಬಾಲಿವುಡನ್ನ ಮೋಸ್ಟ್ ಹ್ಯಾಂಡ್ ಸಮ್ ನಟ ಸಿದ್ದಾರ್ಥ್ ಮಲ್ಹೋತ್ರ ಅವರನ್ನು ವಿವಾಹದ ನಂತರವು ಅಭಿನಯ ಮುಂದುವರೆಸಿದ್ದಾರೆ. ಈಗಲೂ ಬಲು ಬೇಡಿಕೆಯ ನಟಿಯಾಗಿ ಬಾಲಿವುಡ್ ಮತ್ತು ಟಾಲಿವುಡ್ಗಳಲ್ಲಿ ಬ್ಯುಸಿಯಾಗಿ ಬೆಳ್ಳಿತೆರೆಯ ಮೇಲೆ ಮಿಂಚುತ್ತಿದ್ದಾರೆ.
ನಜ್ರಿಯಾ ನಾಜಿಮ್:
೨೦೦೬ರಲ್ಲಿ ಬಾಲ ಕಲಾವಿದೆಯಾಗಿ ‘ಪಲುಂಕು’ ಎಂಬ ಮಲಯಾಳಂ ಚಿತ್ರದ ಮೂಲಕ ಬೆಳ್ಳಿಪರೆದೆಗೆ ಪರಿಚಯವಾದ ನಜ್ರೀಯಾ ತಮ್ಮ ಮುದ್ದು ಮುದ್ದಾದ ಪಾತ್ರಭಿನಯದಿಂದಲೇ ಮಲಯಾಳಂ ಸಿನಿರಸಿಕರ ಮನೆಗೆದಿದ್ದಾರೆ. ಮುಂದೆ ೨೦೧೩ರಲ್ಲಿ ‘ಮಾಡ್ ಡ್ಯಾಡ್’ ಚಿತ್ರದ ಮೂಲಕ ನಾಯಕನಟಿಯಾಗಿ ಬೆಳ್ಳಿತೆರೆಗೆ ಪಾದರ್ಪಣೆ ಮಾಡುವ ನಜ್ರಿಯಾ ನಾಜಿಮ್ ಮೆಲಯಾಳಂ, ತಮಿಳು, ಚಲನಚಿತ್ರರಂಗದಲ್ಲಿ ಬೇಡಿಕೆಯ ಬಹುಭಾಷ ನಟಿಯಾಗುತ್ತಾರೆ.
೨೦೧೪ರಲ್ಲಿ “ಬೆಂಗಳೂರು ಡೇಸ್” ಚಿತ್ರದಲ್ಲಿ ಅಭಿನಯಿಸಿದ ನಂತರ ಮಲಯಾಳಂ ನಟ ನಿರ್ಮಾಪಕರಾದ ಫಹಾದ್ ಫಾಸಿಲ್ ಅವರನ್ನು ವಿವಾಹದರು. ಕೆಲವು ವರ್ಷಗಳ ಕಾಲ ಸಿನಿರಂಗದಿAದ ದೂರವಿದ್ದ ನಜ್ರಿಯಾ, ಈಗ ಮತ್ತೊಮ್ಮೆ ಸಕ್ರಿಯವಾಗಿ ಮಲಯಾಳಂ ಮತ್ತು ತೆಲುಗು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಭಾವನಾ ಮೆನನ್:
೨೦೦೨ರಲ್ಲಿ ತಮ್ಮ ೧೬ನೇ ವಯಸ್ಸಿನಲ್ಲಿ ‘ನಮ್ಮಲ್’ ಎಂಬ ಮಲಯಾಳಂ ಚಲನಚಿತ್ರದಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಮಲಯಾಳಿ ಬೆಡಗಿ ಭಾವನಾ ಮೆನನ್, ಮುಂದೆ ತಮಿಳು, ತೆಲುಗು, ಮತ್ತು ಕನ್ನಡ ಚಲನಚಿತ್ರಗಳಲ್ಲಿ ನಟಿಸಿ ಸಿನಿಪ್ರಿಯರ ಪ್ರೀತಿಗಳಿಸಿದರು. ೨೦೧೦ರಲ್ಲಿ ಪುನೀತ್ ರಾಜ್ಕುಮಾರ್ ಸೂಪರ್ ಹಿಟ್ ಚಿತ್ರ “ಜಾಕಿ” ಚಿತ್ರದಲ್ಲಿ ನಟಿಸಿದ್ದರು. ೨೦೧೮ರಲ್ಲಿ ಕನ್ನಡದ ನಿರ್ಮಾಪಕರಾದ ನವೀನ್ ಅವರೊಂದಿಗೆ ವಿವಾಹದ ನಂತರವು ಬಹು ಬೇಡಿಕೆಯ ನಾಯಕನಟಿಯಾಗಿ ದಕ್ಷಿಣದ ಎಲ್ಲಾ ಭಾಷೆಯ ಚಿತ್ರಗಳಲ್ಲಿ ಈಗಲು ಅಭಿನಯಿಸುತ್ತ ಬೆಳ್ಳಿತೆರೆಯ ಮೇಲೆ ಮಿಂಚುತ್ತಿದ್ದಾರೆ.
ಪ್ರಿಯಾಂಕ ಉಪೇಂದ್ರ:
೧೯೮೧ ರಲ್ಲಿ ‘ಏಕ್ ಹಿ ಭೂಲ್’ ಎಂಬ ಚಲನಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಬಂಗಾಳಿ ಬಾಲೆ ಪ್ರಿಯಾಂಕ ತ್ರಿವೇದಿ. ೧೯೯೭ರಲ್ಲಿ “ಜೋದ್ದಾ” ಎಂಬ ಬಂಗಾಳಿ ಚಿತ್ರದಿಂದ ನಾಯಕಿಯಾಗಿ ತೆರೆಗೆ ಬಂದರು. ಬಹಳಷ್ಟು ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿ ಅಭಿನಯಿಸಿದ ಅವರು ೨೦೦೧ರಲ್ಲಿ ವಿಷ್ಣುವರ್ಧನ್ ಜೊತೆಯಾಗಿ ‘ಕೋಟಿಗೊಬ್ಬ’ ಮತ್ತು ಉಪೇಂದ್ರ ನಿರ್ದೇಶನದ ತಮಿಳು ಮತ್ತು ಕನ್ನಡ ಚಿತ್ರ ‘ಹೆಚ್೨ಓ’ದಲ್ಲಿ ಅಭಿನಯಿಸಿ ಮನೆಮಾತಾದರು. ೨೦೦೩ರಲ್ಲಿ ಕನ್ನಡದ ನಟ ಉಪೇಂದ್ರರನ್ನು ವಿವಾಹವಾಗಿ ಪ್ರಿಯಾಂಕ ಉಪೇಂದ್ರ ಆದರು. ಎರಡು ಮಕ್ಕಳ ತಾಯಿಯಾದ ನಂತರವೂ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿ, ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ.
ಜ್ಯೋತಿಕಾ ಸರವಣನ್:
ಇವರು ೧೯೯೭ರಲ್ಲಿ ‘ಡೋಲಿ ಸಜಾಕೆ ರಖನಾ’ ಎಂಬ ಹಿಂದಿ ಚಿತ್ರದಿಂದ ಬೆಳ್ಳಿಪರೆದೆಗೆ ಪಾದಾರ್ಪಣೆ ಮಾಡಿದರು. ೧೯೯೮ರಲ್ಲಿ ಅಜಿತ್ಕುಮಾರ್ ಸೂಪರ್ ಹಿಟ್ ಚಿತ್ರ “ವಾಲಿ” ಮೂಲಕ ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾದರು. ಒಂದರ ಹಿಂದೆ ಒಂದು ಹಿಟ್ ಚಿತ್ರ ಕೊಟ್ಟು ತಮಿಳಿನ ಟಾಪ್ ನಟಿಯಾದ ಜ್ಯೋತಿಕ ಖ್ಯಾತ ನಟಿ ನಗ್ಮಾ ಮಲಸೋದರಿ. ೨೦೦೨ರಲ್ಲಿ ಉಪೇಂದ್ರರೊಂದಿಗೆ ‘ನಾಗರಹಾವು’ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದರು. ೨೦೦೬ರಲ್ಲಿ ತಮಿಳಿನ ಖ್ಯಾತ ಹಿರಿಯ ನಟರಾದ ಶಿವಕುಮಾರ್ ಪುತ್ರ ಸೂರ್ಯರನ್ನು ಅವರು ವಿವಾಹವಾದರೂ, ಮಹಿಳಾ ಪ್ರಧಾನ ಪಾತ್ರವಿರುವ, ಕೆಟೆಂಟ್ ಓರಿಯಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ನಿರ್ಮಾಪಕಿಯಾಗಿಯು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ರಮ್ಯಾಕೃಷ್ಣ:
೧೯೮೩ರಲ್ಲಿ ತಮಿಳಿನ’ ವೆಲ್ಲಾ ಮನಸು’ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ರಮ್ಯಾ ಕೃಷ್ಣ ಅವರು ಕಳೆದ ನಾಲ್ಕು ದಶಕಗಳಿಂದ ತಮ್ಮ ಮಾದಕ ಮೈಮಾಟದಿಂದ ಚಿತ್ರರಸಿಕರನ್ನು ಸೆಳೆಯುತ್ತಿದ್ದಾರೆ. ೧೯೮೮ರಲ್ಲಿ ಪ್ರಭಾಕರ್ ನಾಯಕರಾಗಿದ್ದ “ಶಕ್ತಿ” ಚಿತ್ರದ ಮೂಲಕ ಕನ್ನಡದಲ್ಲಿ ಅಭಿನಯಿಸಲು ಆರಂಭಿಸಿದರು. ಇಲ್ಲಿವರೆಗೆ ೨೫ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ರಮ್ಯಕೃಷ್ಣ ೧೯೮೯ರಲ್ಲಿ ವಿನೋದ್ಖನ್ನರೊಂದಿಗೆ “ದಯಾವಾನ್” ಹಿಂದಿ ಚಿತ್ರದಲ್ಲೂ ಅಭಿನಯಿಸಿ ಪಂಚಭಾಷೆ ತಾರೆಯಾಗಿದ್ದಾರೆ. ೨೦೦೩ರಲ್ಲಿ ತೆಲುಗಿನ ನಿರ್ದೇಶಕರಾದ ಕೃಷ್ಣ ವಂಶಿರನ್ನು ವಿವಾಹದ ನಂತರವೂ ರಮ್ಯಾಕೃಷ್ಣ, ಬಹುಬೇಡಿಕೆಯ ಬಹು ಭಾಷಾ ನಟಿಯಾಗಿ ಈಗಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಹೀಗೇ ಕಾಲ ಬದಲಾದಂತೆ ಹೀರೋಯಿನ್ಗಳು ಸಹ ಬದಲಾಗಿದ್ದಾರೆ. ಹಿಂದಿನ ಹೀರೋಯಿನ್ಗಳಂತೆ ಮದುವೆ ನಂತರ ಮನೆ ಸೇರಿಕೊಂಡು, ಗಂಡ-ಮಕ್ಕಳು-ಮನೆ ಎಂಬ ಸೀಮಿತ ಚೌಕಟ್ಟಿಗೆ ಸಿಲುಕುತ್ತಿಲ್ಲ. ಇಂಥ ಬದಲಾವಣೆಯ ಪರ್ವ ಆರಂಭಿಸಿದ್ದು, ಬಹುಶಃ ಹಿಂದಿಯ ಡಿಂಪಲ್ ಕಪಾಡಿಯಾ. ೪೦ ವರ್ಷಗಳ ಹಿಂದೆ ಪತಿ ರಾಜೇಶ್ ಖನ್ನಾಗೆ ವಿಚ್ಚೇದನ ನೀಡಿ, “ಸಾಗರ್” ಎಂಬ ಹಿಂದಿ ಚಿತ್ರದಿಂದ ಕಮ್ಬ್ಯಾಕ್ ಮಾಡಿದ ಡಿಂಪಲ್, ೧೯೭೩ರಲ್ಲಿ “ಬಾಬ್ಬಿ” ಚಿತ್ರದಲ್ಲಿ ತೋರಿಸಿದ ಬೋಲ್ಡ್ ಪಾತ್ರಕ್ಕಿಂತ ಮಿಗಿಲಾದ ಬಿಚ್ಚಮ್ಮನ ಪಾತ್ರಗಳನ್ನು ಮಾಡಿದ್ದರು. ಇದಕ್ಕೆ ೧೯೮೬ರ ಫಿರೋಝ್ ಖಾನ್ ನಿರ್ಮಾಣದ “ಜಾನ್ಬಾಝ್” ಚಿತ್ರದಲ್ಲಿ ಅನಿಲ್ ಕಪೂರ್ರೊಂದಿಗೆ ಕಾಣಿಸಿಕೊಂಡ ರೋಚಕ ದೃಶ್ಯಗಳೇ ಸಾಕ್ಷಿ. ಈಗ ಭಾರತೀಯ ಚಿತ್ರರಂಗದಲ್ಲಿ ಸ್ವಲ್ಪ ಲಿಂಗ ತಾರತಮ್ಯ ಸಡಿಲವಾಗಿ, ಮಹಿಳಾ ಶಕ್ತಿ ಪ್ರದರ್ಶನ ತಕ್ಕ ಮಟ್ಟಿಗೆ ಪ್ರವಹಿಸುತ್ತಿದೆ.