ತಮಿಳುನಾಡಿನ ಸ್ಟಾರ್ ನಟ ವಿಶಾಲ್ ಇತ್ತೀಚೆಗೆ ಸುದ್ದಿಯಲ್ಲಿ ಇದ್ದರು. ವಿಶಾಲ್ ನಟಿಸಿದ ‘ಮದಗಜರಾಜ’ ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ವೇದಿಕೆ ಮೇಲೆ ವಿಶಾಲ್ ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ಅವರ ಕೈ ನಡುಗುತ್ತಿತ್ತು. ಮಾತಾಡುವುದಕ್ಕೂ ಪರದಾಡುತ್ತಿದ್ದ ಈ ನಟನನ್ನು ನೋಡಿ ಇಡೀ ಚಿತ್ರರಂಗಕ್ಕೆ ಅಚ್ಚರಿ ಆಗಿತ್ತು. ಈಗ ಮಂಗಳೂರಿನಲ್ಲಿ ನಡೆದ ಜಾರಂದಾಯ ಕೋಲಾದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳಿನ ಸ್ಟಾರ್ ವಿಶಾಲ್ ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ದೈವದ ಮುಂದೆ ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಬೇಡಿಕೊಂಡಿದ್ದಾರೆ. ವಿಶಾಲ್ ಅನಾರೋಗ್ಯದ ಬಳಿಕ ಚೇತರಿಸಿಕೊಂಡಿದ್ದರೂ ದಿಢೀರನೇ ಯಾಕೆ ದೈವದ ಮೊರೆ ಹೋಗಿದ್ದಾರೆ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುವುದಕ್ಕೆ ಶುರು ಮಾಡಿದೆ.
‘ಮದಗಜರಾಜ’ ಇವೆಂಟ್ನಲ್ಲಿ ಮೈಕ್ ಹಿಡಿಯುವುದಕ್ಕೂ ಪರದಾಡಿದ್ದ ತಮಿಳು ನಟ ವಿಶಾಲ್ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಟೀಕೆಗಳನ್ನು ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ವಿಶಾಲ್ ವೈರಲ್ ಫೀವರ್ ಎಂದು ಹೇಳಿಕೆ ಕೊಟ್ಟಿದ್ದರು. ಹೀಗಾಗಿದ್ದರೂ ಅವರ ಅನಾರೋಗ್ಯದ ಬಗ್ಗೆ ಟೀಕೆಗಳು ಮಾತ್ರ ಕಡಿಮೆ ಆಗಿರಲಿಲ್ಲ. ಆನಂತರ ಕೆಲವು ವೇದಿಕೆಗಳಲ್ಲಿ ವಿಶಾಲ್ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟತೆಯನ್ನು ನೀಡಿದ್ದರು. ಅಲ್ಲಿಗೆ ಈ ಮ್ಯಾಟರ್ ತಣ್ಣಗಾಗಿತ್ತು. ಆದ್ರೀಗ ಕೋಲಾರಾಧನೆಯಲ್ಲಿ ಭಾಗಿಯಾಗಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಮೂಲ್ಕಿ ಸಮೀಪದ ಪಕ್ಷಿಕೆರೆಯ ಹರಿಪಾದೆಯ ಧರ್ಮ ದೈವ ಜಾರಂದಾಯ ದೈವಸ್ಥಾನದಲ್ಲಿ ನೇಮೋತ್ಸವ ನಡೆದಿತ್ತು. ಅಲ್ಲಿಗೆ ತಮಿಳು ನಟ ವಿಶಾಲ್ ಅವರ ಆಪ್ತರೊಂದಿಗೆ ಬಂದಿದ್ದರು. ಈ ವೇಳೆ ಸುಮಾರು ಮೂರು ಗಂಟೆಗಳ ಕಾಲ ಕೋಲಾದಲ್ಲಿ ಭಾಗಿಯಾಗಿದ್ದರು. ಈ ವೇಳೆ ದೈವ ಬಳಿಕ ತನ್ನ ಆರೋಗ್ಯ ಹಾಗೂ ವೈಯಕ್ತಿಕ ಬದುಕಿನ ಎದ್ದಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
