ಕನ್ನಡ ಚಿತ್ರರಂಗದ ಯುವ ನಾಯಕ ನಟ ಸುಮುಖ ಹಿಮಾಲಯದ ತಪ್ಪಲಿನಲ್ಲಿ ಸಂಚರಿಸುವಾಗ ಅಪ್ಪು ನಗುವಿನ ಸಾಕ್ಷಾತ್ಕಾರವಾಗಿದೆ. ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ, ಸಮುದ್ರ ಮಟ್ಟದಿಂದ ೫೩೬೪ ಮೀಟರ್ ಎತ್ತರದಲ್ಲಿ ಮಂಜು ಮುಸುಕಿದ ಎತ್ತರೆತ್ತರದ ಶಿಖರಗಳ ನಡುವೆ ಸಂಚರಿಸುವಾಗ ಪವಿತ್ರವಾದ ಹಳದಿ ವಸ್ತ್ರದಿಂದ ಸುತ್ತಲ್ಪಟ್ಟ, ಕೋಟ್ಯಂತರ ಹೃದಯ ಗೆದ್ದಿರುವ ಪವರ್ ಸ್ಟಾರ್ ಅಪ್ಪುವಿನ ಸ್ನಿಗ್ದ ನಗುವಿರುವ ಫೋಟೊ ದೊರಕಿದೆ.
ಇದನ್ನೂ ಓದಿ `IAS&IPS’ನ ಕರಾಳ ಮುಖವನ್ನು ಬಿಚ್ಚಿಡುತ್ತಾ ’12th ಫೇಲ್’? ಬಹುನಿರೀಕ್ಷಿತ ಚಿತ್ರ ಅ.27ಕ್ಕೆ ಕೆ.ಆರ್.ಜಿ ಸ್ಟುಡಿಯೋಸ್ನಿಂದ ಕರ್ನಾಟಕದಲ್ಲಿ ವಿತರಣೆ
‘ಕಾಗದದ ದೋಣಿಯಲಿ ಚಿತ್ರದ ಎರಡನೇ ಶೆಡ್ಯುಲ್ ಆರಂಭವಾಗುವ ಮೊದಲು ನಾನು ಕೆಲವು ಕಾಲ ಪ್ರಕೃತಿಯ ನಡುವೆ ಕಳೆಯಲು ನಿರ್ಧರಿಸಿದ್ದೆ. ನೇಪಾಳದ ಲುಕ್ಲಾದಿಂದ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಹತ್ತು ದಿನದ ಚಾರಣದ ಕಾರ್ಯಕ್ರಮ ಅದಾಗಿತ್ತು. ಕರ್ನಾಟಕದಿಂದ ನಾನು ಒಬ್ಬನೇ ಹೋಗಿದ್ದು. ಅಲ್ಲಿ ಹಿಮದ ರಾಶಿಯ ನಡುವೆ ಅಪ್ಪುವಿನ ಫೋಟೋ ನೋಡಿದಾಗ ಮೊದಲು ನನಗೆ ಅಚ್ಚರಿ ಆಯ್ತು. ನಿಧಾನವಾಗಿ ಅವರ ಜನಪ್ರಿಯತೆ ಅವರ ಮೇಲಿನ ಗೌರವ ಹಾಗೂ ಆಧರದ ಪ್ರಮಾಣ ಎಷ್ಟಿರಬಹುದು ಎಂದು ಮನಸಿನ ಆಳಕ್ಕೆ ಇಳಿಯಿತು. ಕನ್ನಡದ ನೆಲೆಯಿಂದ ದೂರ ಇರುವಾಗ, ನನ್ನನ್ನು ನಾನು ಆ ಅಗಾಧ ಪ್ರಕೃತಿಯ ನಡುವೆ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಎಲ್ಲರಿಗೂ ಪ್ರೇರಣೆಯಾಗಿರುವ ಅವರ ನಗು ನನ್ನ ಮನಸ್ಸನ್ನ ನಿರಾಳಗೊಳಿಸಿತು. ತುಂಬಾ ವರ್ಷಗಳಿಂದ ನಮಗೆ ಗೊತ್ತಿರೋರು ದೂರ ದೇಶದಲ್ಲಿ ಎದುರಾದಾಗ ಆಗುತ್ತಲ್ಲ ಆ ಖುಷಿ ಅದು’ ಎಂದು ತಮಗಾದ ಅನುಭವವನ್ನು ಹಂಚಿಕೊಂಡರು ದ್ವಿಭಾಷ ನಟ ಸುಮುಖ.
ಇದನ್ನೂ ಓದಿ ಮೈಸೂರು ದಸರಾದಲ್ಲಿ ಬಿಡುಗಡೆಯಾಯಿತು “F0R REGN” ಚಿತ್ರದ ಪೋಸ್ಟರ್ ಹಾಗೂ ಹಾಡು…
‘ಪ್ರಕೃತಿ ನಮಗೆ ಅನೇಕ ಬಗೆಯ ಸಂದೇಶಗಳನ್ನು ರವಾನಿಸುತ್ತಾ ಇರುತ್ತದೆ. ಅಂದು ನಮ್ಮ ಚಾರಣದ ಒಂಭತ್ತನೇ ದಿನ. ಅದಾಗಲೇ ನಾಲ್ಕು ಗಂಟೆಯ ನಡಿಗೆ ಪೂರೈಸಿದ್ದೆವು. ಸಹಜವಾಗಿಯೇ ದಣಿದಿದ್ದೆವು. ಆಗ ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ ಅಪ್ಪುವಿನ ಫೋಟೋ ದೊರಕಿದ್ದು ನನಗೆ ನಿಜಕ್ಕೂ ಒಂದು ಬಗೆಯಲ್ಲಿ ಪ್ರೇರಣೆಯಾಗಿದೆ’ ಎನ್ನುತ್ತಾರೆ, ಕನ್ನಡ ಹಾಗೂ ಮರಾಠಿಯಲ್ಲಿ ತಯಾರಾಗಿರುವ ಚಿತ್ರ ರಾಜಸ್ಥಾನ್ ಡೈರೀಸ್ ನಾಯಕ ನಟ ಸುಮುಖ.
‘ಈ ಫೋಟೋ ಇಲ್ಲಿಯವರೆಗೂ ಯಾರು ತಂದಿರಬಹುದು ಎಂದು ಮಾಹಿತಿಗಾಗಿ ಹುಡುಕಿದೆ. ಫೋಟೋ ಮೇಲಾಗಲಿ ಹಿಂಬದಿಯಲ್ಲಾಗಲಿ ಯಾವ ಹೆಸರು ಅಥವಾ ಫೋನ್ ನಂಬರ್ ಇರಲಿಲ್ಲ. ಬಹುಶಃ ಎವರೆಸ್ಟ್ ಏರುವ ಅಪ್ಪುರನ್ನು ಪರಮಾತ್ಮ ಚಿತ್ರದಲ್ಲಿ ನೋಡಿರುವ ಅಭಿಮಾನಿಯೊಬ್ಬರು ಕರ್ನಾಟಕದಿಂದ ಇಲ್ಲಿಯವರೆಗೂ ಈ ಫೋಟೋ ತಂದು ಹಿಮದಲ್ಲಿ ಹುದುಗಿಟ್ಟಿರಬಹುದು. ಕಾಲ ಹಾಗೂ ಗಾಳಿಯ ತೆಕ್ಕೆಗೆ ಬಂದ ಫೋಟೋ ನನ್ನ ಕಣ್ಣಿಗೆ ಕಂಡದ್ದು ಅದೃಷ್ಟವೇ ಸರಿ’ ಎಂದು ಭಾವುಕರಾದರು ಯುವ ನಾಯಕ ಸುಮುಖ.