ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟಿಸಿರುವ ‘ಸಂಜು ವೆಡ್ಸ್ ಗೀತಾ 2’. ನಾಗಶೇಖರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ಹೈದರಾಬಾದ್ ಸಿಟಿ ಸಿವಿಲ್ ಕೋರ್ಟ್ನಿಂದ ತಡೆಯಾಜ್ಞೆ ಬಂದಿದ್ದರಿಂದ ಬಿಡುಗಡೆಯಾಗಿರಲಿಲ್ಲ.ಈಗ ಚಿತ್ರತಂಡ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ. ಕಾನೂನು ತೊಡಕುಗಳನ್ನು ಬಗೆಹರಿಸಿಕೊಂಡು ಇದೇ ಜನವರಿ 17ರಂದು ಸಿನಿಮಾ ಬಿಡುಗಡೆಯಾಗುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದರ ಜೊತೆಗೆ ಚಿತ್ರತಂಡ ಈ ಸಿನಿಮಾಗೆ ಎದುರಾಗಿದ್ದ ಸಮಸ್ಯೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ.
‘ಸಂಜು ವೆಡ್ಸ್ ಗೀತಾ 2’ ನಿರ್ದೇಶಿಸುವುದಕ್ಕೂ ಮುನ್ನ ನಾಗಶೇಖರ್ ತೆಲುಗಿನಲ್ಲಿ ‘ಗುರ್ತುಂದಾ ಶೀತಕಾಲಂ’ ಅನ್ನೋ ಚಿತ್ರವನ್ನು ಡೈರೆಕ್ಷನ್ ಜೊತೆ ನಿರ್ಮಾಣ ಕೂಡ ಮಾಡಿದ್ದರು. ಇದು ಕನ್ನಡ ‘ಲವ್ ಮಾಕ್ಟೇಲ್’ ಸಿನಿಮಾ ರಿಮೇಕ್ ಆಗಿತ್ತು. ಭಾವನ ರವಿ, ರಾಮ ರಾವ್ ಚಿಂತಪಲ್ಲಿ ಜೊತೆ ಸೇರಿ ನಾಗಶೇಖರ್ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ತೆಲುಗಿನಲ್ಲಿ ಸೋತಿತ್ತು. ಆ ಕಮಿಟ್ಮೆಂಟ್ ಹಿನ್ನೆಲೆಯಲ್ಲಿ ‘ಸಂಜು ವೆಡ್ಸ್ ಗೀತಾ 2’ ತಡೆಯಾಜ್ಞೆ ತಂದಿದ್ದಾರೆಂದು ಆರೋಪಿಸಲಾಗಿದೆ.
“ಈ ಮೂಲಕ ನೇರವಾಗಿ ಸ್ಪಷ್ಟನೆ ಕೊಡುವ ವಿಚಾರ ಏನು ಅಂದರೆ, ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ನಾನು ಒಬ್ಬ ಸ್ಟೋರಿ, ಸ್ಕ್ರೀನ್ಪ್ಲೇ, ಡೈರೆಕ್ಷನ್ ಮಾತ್ರ ನನ್ನದು. ಇದು ಬಿಟ್ಟು ಈ ಸಿನಿಮಾದ ಬೇರೆ ಯಾವುದೇ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಸಂಬಂಧವಿದೆ ಎಂದು ಕಲ್ಪಿಸಿಕೊಂಡು ತಡೆಯಾಜ್ಞೆ ತಂದರು. ಆದರೆ, ನ್ಯಾಯಾಲಯ ಇದು ಚಲವಾದಿ ಕುಮಾರ್ ಅವರ ನಿರ್ಮಾಣದಲ್ಲಿ ಆಗಿರುವಂತಹ ಸಿನಿಮಾ ಅಂತ ಪರಿಗಣನೆಗೆ ತೆಗೆದುಕೊಂಡು, ಆ ತಡೆಯಾಜ್ಞೆಯನ್ನು ನಿನ್ನೆ ತೆರವುಗೊಳಿಸಿ, ಈ ಸಿನಿಮಾಗೆ ಕಾನೂನಾತ್ಮಕ ನಿರ್ಬಂಧವನ್ನು ತಿರಸ್ಕರಿಸಿ ಅಪ್ಪಣೆಯನ್ನು ನೀಡಿದೆ.” ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.