ಕನ್ನಡ ಚಿತ್ರರಂಗಕ್ಕೆ ಸೋಮವಾರ (ಫೆ.20) ಮುಂಜಾನೆಯೇ ಕಹಿ ಸುದ್ದಿ ಸಿಕ್ಕಿದೆ. ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (SK Bhagavan) ಅವರು ಬೆಂಗಳೂರಿನಲ್ಲಿ ಮುಂಜಾನೆ 6 ಗಂಟೆಗೆ ನಿಧನ ಹೊಂದಿದ್ದಾರೆ. ಈ ವಿಚಾರದ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಭಗವಾನ್ ಅವರು ಹಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಭಗವಾನ್ ನಿಧನಕ್ಕೆ ಸಿನಿಪ್ರಿಯರು, ಕನ್ನಡ ಚಿತ್ರರಂಗದ ಹಿರಿಯರು ಸಂತಾಪ ಸೂಚಿಸುತ್ತಿದ್ದಾರೆ.
1956ರಲ್ಲಿ ಹಿರಿಯ ನಿರ್ದೇಶಕ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರಿಗೆ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಭಗವಾನ್, ‘ಸಂಧ್ಯಾರಾಗ’ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾದರು. ಡಾ. ರಾಜ್ ಕುಮಾರ್, ಉದಯ್ ಕುಮಾರ್, ನರಸಿಂಹರಾಜು, ಲಕ್ಷ್ಮೀ, ಆರತಿ, ಜಯಂತಿ, ರಾಜೇಶ್, ಕಲ್ಪನಾ, ಮಂಜುಳಾ, ಅನಂತ್ ನಾಗ್, ಶಂಕರ್ ನಾಗ್, ಬಿ. ಸರೋಜಾ ದೇವಿ, ಡಾ. ವಿಷ್ಣುವರ್ಧನ್, ಮಾಲಾಶ್ರೀ, ಅಂಬರೀಷ್, ಪುನೀತ್ ರಾಜಕುಮಾರ್ ಹಾಗೂ ಇತರೆ ಖ್ಯಾತ ನಟರು ಮತ್ತು ನಟಿಯರ ಜತೆಗೆ ಎಸ್.ಕೆ. ಭಗವಾನ್ ಕೆಲಸ ಮಾಡಿದ್ದಾರೆ.
ದೊರೈ-ಭಗವಾನ್ ಸೇರಿ 55 ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸದಭಿರುಚಿಯ ಚಿತ್ರಗಳನ್ನು ನೀಡಿರುವ ಈ ಜೋಡಿ, 24 ಕಾದಂಬರಿ ಆಧರಿತ ಸಿನಿಮಾ ಮಾಡಿದ್ದಾರೆ. ಡಾ. ರಾಜ್ ಕುಮಾರ್ ಜೊತೆ ದೊರೈ-ಭಗವಾನ್ ಜೋಡಿ ಅತಿ ಹೆಚ್ಚು ಸಿನಿಮಾ ಮಾಡಿದೆ.
ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಎಂಬ ಹೆಸರಿದ್ದರೂ ಇವರು ಭಗವಾನ್ ಹೆಸರಿನಿಂದಲೇ ಪ್ರಸಿದ್ಧರು. ಡಾ. ರಾಜ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ‘ಕಸ್ತೂರಿ ನಿವಾಸ’, ‘ಎರಡು ಕನಸು’, ‘ಬಯಲು ದಾರಿ’, ‘ಗಿರಿ ಕನ್ಯೆ’, ‘ಚಂದನದ ಗೊಂಬೆ’, ‘ಆಪರೇಶನ್ ಡೈಮಂಡ್ ರಾಕೆಟ್’, ‘ಹೊಸ ಬೆಳಕು’ ಸೇರಿದಂತೆ 55 ಚಿತ್ರಗಳನ್ನು ಸ್ನೇಹಿತ ದೊರೈ ರಾಜ್ ಜೊತೆ ಸೇರಿ ನಿರ್ದೇಶಿಸಿದವರು.
ಕನ್ನಡದಲ್ಲಿ ಜೇಮ್ಸ್ ಬಾಂಡ್ ಶೈಲಿಯ ಚಲನಚಿತ್ರಗಳನ್ನು ಮಾಡಿದ ಮೊದಲ ನಿರ್ದೇಶಕ ಭಗವಾನ್.
ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 90 ವರ್ಷದ ಭಗವಾನ್ ಕೊನೆಯುಸಿರೆಳೆದಿದ್ದಾರೆ.