ಕ್ಯಾನ್ಸರ್ ಗೆದ್ದ ಡಾ.ಶಿವರಾಜ್ ಕುಮಾರ್
ಡಾ. ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ ಅಪರೂಪದ ಆಕ್ಟರ್. ಕ್ಲಾಸ್- ಮಾಸ್ ಸೇರಿದಂತೆ ಯಾವ ಪಾತ್ರಕ್ಕಾದರೂ ಸೈ ಎನ್ನುವಂಥಾ ಮನಸ್ಥಿತಿ ಇವರದ್ದು. ಬಹುಶಃ ಡಾ.ರಾಜ್ ಕುಮಾರ್ ಅವರನ್ನು ಹೊರತು ಪಡಿಸಿದರೆ ವೆರೈಟಿ ಪಾತ್ರಗಳನ್ನು ಮಾಡಿದ, ತಮ್ಮನ್ನು ತಾವು ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡ ಮತ್ತೋರ್ವ ಸ್ಟಾರ್ ಅಂದರೆ ಅದು ಶಿವಣ್ಣ ಮಾತ್ರ.
ಇಂಥಾ ಡಾ.ಶಿವರಾಜ್ ಕುಮಾರ್ ಅವರಿಗೆ ಈಗ ವಯಸ್ಸು ಅರವತ್ತೇರಡು. ಆದರೆ ಹುಮ್ಮಸ್ಸು ಹದಿಹರೆಯದ ಯುವಕರದ್ದು. ಆದರೆ, ಅದ್ಯಾರ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. ಶಿವಣ್ಣ ಕ್ಯಾನ್ಸರ್ಗೆ ತುತ್ತಾದರು. ಚಿಕಿತ್ಸೆಯನ್ನು ಪಡೆಯಲು ತೆರಳಿದರು. ಸಹಜವಾಗಿ ಇದರಿಂದ ಡಾ.ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗಷ್ಟೇ ಅಲ್ಲ ಅನೇಕ ಕನ್ನಡಿಗರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ಆ ಆತಂಕ ದೂರವಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಆರೋಗ್ಯದ ಎಲ್ಲ ವರದಿಗಳು ನೆಗೆಟಿವ್ ಬಂದಿವೆ. ಖುದ್ದು ಶಿವಣ್ಣ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್ದಿಂದ ಮುಕ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ; Max Movie Review: ತಲೆಗೆ ಹೊಕ್ಕಿದ ಬೋಧನೆಯ `ಹುಳ’ಕ್ಕೆ ರಂಜನೆಯ ಲಸಿಕೆ!
ಈ ಕುರಿತು ಮಾತನಾಡಿರುವ ಶಿವಣ್ಣ ಮಾತನಾಡುವಾಗ ಎಲ್ಲಿ ಭಾವುಕ ಆಗ್ತೀನಿ ಎನ್ನುವ ಭಯ ಆಗುತ್ತೆ. ಯಾಕೆಂದರೆ ಹೊರಡುವಾಗ ಸ್ವಲ್ಪ ಎಮೋಶನಲ್ ಆಗಿದ್ದೆ, ಭಯ ಎನ್ನುವುದು ಇದ್ದೇ ಇರುತ್ತೆ ಮನುಷ್ಯನಿಗೆ ಆದರೆ ಆ ಭಯವನ್ನು ದೂರ ಮಾಡಲು ಅಂತನೇ ಅಭಿಮಾನಿ ದೇವರುಗಳಿರುತ್ತಾರೆ, ಸಹ ಕಲಾವಿದರು ಇರ್ತಾರೆ, ಸ್ನೇಹಿತರು ಇರ್ತಾರೆ, ಸಂಬಂಧಿಕರು ಇರ್ತಾರೆ, ಎಲ್ಲಕ್ಕಿಂತ ಹೆಚ್ಚಾಗಿ ಡಾಕ್ಟರ್ಗಳು ಇರ್ತಾರೆ ಎಂದು ಹೇಳಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಕೀಮೋಥೆರಪಿ ಚಿಕಿತ್ಸೆಯನ್ನು ನೀಡಿದ ಡಾ. ಶಶಿಧರ್, ದಿಲೀಪ್, ಯೋಗಿತಾ, ಬಿಕೆ ಶ್ರೀನಿವಾಸ್ ಹೀಗೆ ಪ್ರತಿಯೊಬ್ಬರು ನನ್ನನ್ನೂ ನೋಡಿಕೊಂಡ ರೀತಿ ಇರಬಹುದು, ಧೈರ್ಯ ತುಂಬಿದ ರೀತಿ ಇರಬಹುದು, ಅವಾಗ ಸ್ವಲ್ಪ ಆರಾಮಾಗಿರುತ್ತಿದ್ದೆ, ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ, ಅದ್ಯಾವ ಜೋಶ್ನಲ್ಲಿ ಬಂತೋ ನನಗೂ ಗೊತ್ತಿಲ್ಲ ಎಂದಿದ್ದಾರೆ. ’45’ ಚಿತ್ರದ ಇಡೀ ಚಿತ್ರೀಕರಣ ಮತ್ತು ಕ್ಲೈಮ್ಯಾಕ್ಸ್ ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಾನೇ ಮಾಡಿದ್ದು, ಅದ್ಹೇಗೆ ಮಾಡಿದ್ನೋ ಗೊತ್ತಿಲ್ಲ ಅದರ ಕ್ರೆಡಿಟ್ ರವಿವರ್ಮಾ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.
ಮುಂದುವರೆದು ಚಿಕಿತ್ಸೆಗೆ ಹೊರಡುವ ದಿನ ಹತ್ತಿರ ಬರ್ತಾ ಬರ್ತಾ ಆತಂಕ ಹೆಚ್ಚಾಯ್ತು ಎಂದಿರುವ ಶಿವಣ್ಣ, ನನ್ನ ಬಾಲ್ಯ ಸ್ನೇಹಿತರು ಶೇಖರ್, ವಿಜಯ್ ಪ್ರಸಾದ್ ಎಲ್ಲರು ನನ್ನ ಜೊತೆ ನಿಂತರು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಗೀತಾ ಇಲ್ಲದೇ ಶಿವಣ್ಣ ಇಲ್ಲ. ನನ್ನ ಪತ್ನಿ ಗೀತಾ ಮತ್ತು ನನ್ನ ಮಗಳು ನೀವಿಯ ಬೆಂಬಲ ಪ್ರೋತ್ಸಾಹ ನನಗೆ ಯಾವತ್ತಿದ್ದರೂ ಸಿಕ್ಕಿದೆ ಎಂದಿದ್ದಾರೆ. ನಿವೇದಿತಾ ಅವರ ಸ್ನೇಹಿತ ಪ್ರಶಾಂತ್ ಮತ್ತು ಅನು ಅವರ ಸಹಾಯ ಸಹಕಾರವನ್ನು ನೆನೆದಿರುವ ಶಿವಣ್ಣ ಮಧು ಬಂಗಾರಪ್ಪ ಮಗುನ ಹೇಗೆ ನೋಡ್ಕೋಬೇಕೋ ಹಾಗೇ ನನ್ನನ್ನು ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ನನಗೆ ಕಿಡ್ನಿ ಕಸಿ ಮಾಡಲಾಗಿದೆ ಎಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ಧಾರೆ. ಆದರೆ ಅದು ಸುಳ್ಳು ಸತ್ಯ ಏನೆಂದರೆ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನ ತೆಗೆದು ಹಾಕಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಕೃತಕ ಮೂತ್ರ ಪಿಂಡವನ್ನ ಅಳವಡಿಸಿದ್ದಾರೆ. ಇಷ್ಟೇ ಆಗಿದ್ದು, ಇದೇ ಸಮಸ್ಯೆ ಎಂದು ಹೇಳಿದ್ದಾರೆ. ಎಲ್ಲವನ್ನು ವಿವರವಾಗಿ ಹೇಳಲು ಹೋದರೆ ಎಲ್ಲರು ಗಾಬರಿಯಾಗ್ತಾರೆ ಎನ್ನುವ ಭಯ ನಮಗೆ ಇತ್ತು. ಹೀಗಾಗಿ ನಿಮ್ಮನ್ನು ಗಾಬರಿಗೊಳಿಸುವುದು ನನಗೆ ಇಷ್ಟ ಇರಲಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಹರಕೆ ಹಾರೈಕೆಗಳನ್ನು ನಾನು ಯಾವತ್ತು ಮರೆಯಲ್ಲ ಎಂದಿರುವ ಶಿವಣ್ಣ ಹೊಸ ವರ್ಷದ ಶುಭಾಶಯವನ್ನು ತಿಳಿಸಿ, ಸದ್ಯದಲ್ಲಿಯೇ ಮರಳಿ ಬರುವುದಾಗಿ ಹೇಳಿದ್ದಾರೆ.