ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ನಾಳೆ (ಅಕ್ಟೋಬರ್ 2) ದೇಶದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಇಂದೇ ಅನೇಕ ನಗರಗಳಲ್ಲಿ ಪ್ರೀಮಿಯರ್ ಶೋಗಳು ನಡೆಯುತ್ತಿವೆ.

ಇತ್ತೀಚೆಗಷ್ಟೆ ಹೈದರಾಬಾದ್ನಲ್ಲಿ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಿಷಬ್ ಕನ್ನಡದಲ್ಲಿ ಮಾತನಾಡಿದ ಕಾರಣ ತೆಲುಗು ಅಭಿಮಾನಿಗಳ ಅಸಮಾಧಾನ ವ್ಯಕ್ತವಾಯಿತು. “2022ರಲ್ಲಿ ತೆಲುಗಿನಲ್ಲಿ ಪ್ರಚಾರ ಮಾಡಿದ ರಿಷಬ್, ಈಗ ಕನ್ನಡದಲ್ಲೇ ಮಾತನಾಡುವುದು ಸರಿಯಲ್ಲ” ಎಂದು ವಿರೋಧ ವ್ಯಕ್ತವಾಗಿತ್ತು. ಸಿನಿಮಾ ಬಿಡುಗಡೆಗೆ ಅಡೆತಡೆ ತರಬೇಕೆಂಬ ಮಾತುಗಳೂ ಕೇಳಿಬಂದವು.
ಆದರೆ, ಸೆಪ್ಟೆಂಬರ್ 30ರಂದು ವಿಜಯವಾಡದಲ್ಲಿ ನಡೆದ ಅದ್ದೂರಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ತೆಲುಗಿನಲ್ಲಿ ಮಾತನಾಡಿ ವಿವಾದಕ್ಕೆ ತೆರೆ ಎಳೆದರು. ಅವರು,
“ಮೂರು ವರ್ಷಗಳ ಹಿಂದೆ ಇದೇ ದಿನ ‘ಕಾಂತಾರ’ ಬಿಡುಗಡೆಯಾಯಿತು. ಅಪಾರ ಪ್ರೀತಿ ಮತ್ತು ಆಶೀರ್ವಾದ ನೀಡಿದಕ್ಕಾಗಿ ಧನ್ಯವಾದಗಳು. ಈಗ ‘ಕಾಂತಾರ: ಚಾಪ್ಟರ್ 1’ ಕೂಡ ನಿಮ್ಮ ಪ್ರೀತಿ, ಬೆಂಬಲ ಪಡೆಯಲಿ” ಎಂದು ತೆಲುಗಿನಲ್ಲಿ ಹೃದಯಪೂರ್ವಕವಾಗಿ ಹೇಳಿದರು. ದಸರಾ ಹಬ್ಬದ ಶುಭಾಶಯಗಳನ್ನೂ ತಿಳಿಸಿದರು.
ಜೂ.ಎನ್ಟಿಆರ್, ಪ್ರಭಾಸ್, ಪವನ್ ಕಲ್ಯಾಣ್ ಹಾಗೂ ಸಿಎಂ ಚಂದ್ರಬಾಬು ನಾಯ್ಡುಗೆ ಧನ್ಯವಾದ ಅರ್ಪಿಸಿದ ನಂತರ, ಕನ್ನಡದಲ್ಲಿಯೂ ಮಾತಾಡಿದ ರಿಷಬ್,
“ನಾನು ಅಪ್ಪಟ ಕನ್ನಡಿಗ, ಕನ್ನಡದ ಅಭಿಮಾನಿ. ಆದರೆ ತೆಲುಗು ನಮ್ಮ ಸಹೋದರ ಭಾಷೆ. ಕನ್ನಡ-ತೆಲುಗು ಒಗ್ಗಟ್ಟಿನ ಭಾಷೆಗಳು” ಎಂದು ಸಂದೇಶ ನೀಡಿದರು.
ಅದೇ ಸಮಯದಲ್ಲಿ, “ನನ್ನ ಮುಂದಿನ ‘ಜೈ ಹನುಮಾನ್’ ಸಿನಿಮಾ ಬಿಡುಗಡೆಯಾಗುವಷ್ಟರಲ್ಲಿ ಇನ್ನೂ ಉತ್ತಮವಾಗಿ ತೆಲುಗು ಕಲಿತು ಮಾತನಾಡುತ್ತೇನೆ” ಎಂಬ ಭರವಸೆಯನ್ನೂ ಅಭಿಮಾನಿಗಳಿಗೆ ನೀಡಿದರು.
