ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ಆದರೆ ಪ್ರಕರಣದ ವಿಚಾರಣೆ ಇನ್ನು ಮುಗಿದಿಲ್ಲ. ಇಂದು(ಫೆಬ್ರವರಿ 25) ಸಿಟಿ ಸಿವಿಲ್ ಕೋರ್ಟ್ ಮುಂದೆ ಎಲ್ಲಾ 17 ಜನ ಆರೋಪಿಗಳು ಹಾಜರಾಗುತ್ತಿದ್ದಾರೆ. ಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ನಡೆಯಲಿದೆ. ಈ ಹಿಂದೆ ಜನವರಿ 10ರಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಎಲ್ಲಾ ಆರೋಪಿಗಳು ಹಾಜರಾಗಿ ವಿಚಾರಣೆ ಎದುರಿಸಿದರು. ಆರು ತಿಂಗಳ ಬಳಿಕ ಕೋರ್ಟ್ನಲ್ಲೇ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿ ಆಗಿದ್ದರು. ದರ್ಶನ್ ನೋಡಿ ಪವಿತ್ರಾ ಭಾವುಕರಾಗಿದ್ದರು ಎಂದು ವರದಿಯಾಗಿತ್ತು. ಬಳಿಕ ಮುಂದಿನ ವಿಚಾರಣೆಯನ್ನು ಕೋರ್ಟ್ ಫೆಬ್ರವರಿ 25ಕ್ಕೆ ಮುಂದೂಡಿತ್ತು.
ಜಾಮೀನು ನೀಡುವಾಗ ವಿಚಾರಣೆಗೆ ತಪ್ಪದೇ ಹಾಜರಾಗಬೇಕು ಎಂದು ಕೋರ್ಟ್ ಎಲ್ಲಾ 17 ಜನ ಆರೋಪಿಗಳಿಗೆ ಷರತ್ತು ವಿಧಿಸಿತ್ತು. ಹಾಗಾಗಿ ಇಂದು ಕೂಡ ಎಲ್ಲರೂ ವಿಚಾರಣೆ ಎದುರಿಸಲಿದ್ದಾರೆ. ಒಂದೂವರೆ ತಿಂಗಳ ಬಳಿಕ ಮತ್ತೆ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್ನಲ್ಲಿ ಮುಖಾಮುಖಿ ಆಗಲಿದ್ದಾರೆ. ಕಳೆದ ವರ್ಷ ಜೂನ್ 8ರಂದು ರೇಣುಕಾಸ್ವಾಮಿ ಹ* ನಡೆದಿತ್ತು. ಮರುದಿನ ಮೃತದೇಹ ಮತ್ತೆ ಆಗಿತ್ತು. ಜೂನ್ 10ರಂದು ನಾಲ್ವರು ಹೋಗಿ ಶರಣಾಗಿದ್ದರು. ಆದರೆ ಪೊಲೀಸ್ ವಿಚಾರಣೆ ವೇಳೆ ಶಾಕಿಂಗ್ ವಿಚಾರಗಳು ಹೊರಬಿದ್ದಿತ್ತು. ಜೂನ್ 11ರಂದು ಮೈಸೂರಿನಲ್ಲಿ ನಟ ದರ್ಶನ್ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಪವಿತ್ರಾ ಗೌಡ ಸೇರಿ ಇನ್ನುಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ವಿಚಾರಣೆ ನಡೆಸಿ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. 4 ತಿಂಗಳ ಬಳಿಕ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಡಿಸೆಂಬರ್ನಲ್ಲಿ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಪ್ರಕರಣದ ಸಂಬಂಧ ಪೊಲೀಸರು 3991 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರೆ ದರ್ಶನ್ ಎ1 ಆರೋಪಿ ಆಗಿದ್ದಾರೆ.
ನಟ ದರ್ಶನ್ ಬಳ್ಳಾರಿ ಜೈಲಿಗೆ ಹೋದಮೇಲೆ ಬೆನ್ನು ನೋವಿನ ಸಮಸ್ಯೆ ಬಹಳ ಬಾಧಿಸಿತ್ತು. ಜಾಮೀನು ಪಡೆದು ಹೊರಬಂದರೂ ಎಂದಿನಂತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಮೈಸೂರಿನ ಫಾರ್ಮ್ಹೌಸ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ಬಾರಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆಗೂ ಬ್ರೇಕ್ ಹಾಕಿದ್ದರು. ಸರಳವಾಗಿ ಆಪ್ತರ ಜೊತೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಮೊದಲು ನಟಿಸಬೇಕಿತ್ತು. ಒಂದು ವಾರದ ಚಿತ್ರೀಕರಣ ಸಹ ಮುಗಿದಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರಕ್ಕೆ ಕಾಲ್ಶೀಟ್ ಕೊಟ್ಟಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಚಿತ್ರ ನಿರ್ಮಾಣ ಮಾಡಲಿದೆ. ಬಳಿಕ ‘ಸಿಂಧೂರ ಲಕ್ಷ್ಮಣ’ ಜೀವನಾಧರಿತ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ತರುಣ್ ನಿರ್ದೇಶನದ ಚಿತ್ರಕ್ಕೆ ಮೀಡಿಯಾ ಹೌಸ್ ಸಂಸ್ಥೆ ಹಣ ಹೂಡಲಿದೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ದರ್ಶನ್ ನಟಿಸಬೇಕಿದೆ. ಇನ್ನು ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ನಿಂದ ಜಾಮೀನು ಸಿಕ್ಕಿದೆ. ಆದರೆ ಇದನ್ನು ಪ್ರಶ್ನಿಸಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಯ ವಿಚಾರಣೆ ಕೂಡ ನಡೆಯಬೇಕಿದೆ. ದರ್ಶನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಾಡುತ್ತಾರೆ ಎನ್ನಲಾಗ್ತಿದೆ. ಹೈಕೋರ್ಟ್ನಲ್ಲಿ ಗೆಲುವು ಸಿಕ್ಕಂತೆ ಸುಪ್ರೀಂ ಕೋರ್ಟ್ನಲ್ಲೂ ದರ್ಶನ್ಗೆ ಗೆಲುವು ಸಿಗುತ್ತಾ ಕಾದು ನೋಡಬೇಕಿದೆ.