ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ʻಕಾಟೇರʼ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಪಬ್ ಒಂದರಲ್ಲಿ ಮಧ್ಯರಾತ್ರಿಯವರೆಗೂ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅದಕ್ಕೆ ಸಂಬಂಧಿಸಿದಂತೆ ಪೊಲೀಸರು ದರ್ಶನ್, ಚಿಕ್ಕಣ್ಣ, ಪ್ರಜ್ವಲ್, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವರಿಗೆ ನೋಟೀಸ್ ನೀಡಿದ್ದರು. ನಿನ್ನೆ ದರ್ಶನ್ ಅಂಡ್ ಟೀಂ ಪೊಲೀಸರ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರಿಗೆ ಈ ಸಂಬಂಧ ಮಾಹಿತಿಯನ್ನು ನೀಡಿದ್ದಾರೆ.
ವಿಚಾರಣೆಯ ಬಳಿಕ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ದರ್ಶನ್ ಅವರನ್ನು ಸುಮ್ಮನೆ ಟಾರ್ಗೆಟ್ ಮಾಡಲಾಗುತ್ತಿದೆ. ನಾವೂ ತಡರಾತ್ರಿ ಪಾರ್ಟಿ ಮಾಡಿರಲಿಲ್ಲ. ಊಟ ಮಾಡಿದ್ದೆವು ಅಷ್ಟೇ. ಸುಮ್ಮನೆ ಟಾರ್ಗೆಟ್ ಮಾಡುವುದು ಒಳ್ಳೆಯದಲ್ಲ. ಇದರ ಹಿಂದೆ ಯಾರಿದ್ದಾರೆಂಬುದು ನನಗೆ ಗೊತ್ತು. ʻಕಾಟೇರʼ ಸಿನಿಮಾ ಸಕ್ಸಸ್ ಆಗಿರುವುದಕ್ಕೆ ದರ್ಶನ್ ಅವರ ಹೆಸರಿಗೆ ಮಸಿ ಬಳಿಯುವುದಕ್ಕೆ ಯಾರ್ಯಾರು ಏನೇನು ಮಾಡುತ್ತಿದ್ದಾರೆಂಬುದು ಗೊತ್ತಾಗುತ್ತಿದೆ. ಇದು ಒಳ್ಳೆಯದಲ್ಲ ಎಂದೇ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಸಿನಿಮಾ ಯಶಸ್ವಿಯಾಗುವುದು ಮುಖ್ಯ. ಆದರೆ ದರ್ಶನ್ ಅವರನ್ನು ಟಾರ್ಗೆಟ್ ಯಾಕೆ ಮಾಡುತ್ತಿದ್ದೀರಾ. ಕನ್ನಡ ಚಿತ್ರರಂಗದಲ್ಲಿ ನಮ್ಮದೇ ಸಿನಿಮಾವಲ್ಲ, ಎಲ್ಲಾ ಸಿನಿಮಾಗಳು ಓಡಬೇಕು. ಡಾಲಿ, ಚಿಕ್ಕಣ್ಣ, ಅಭಿಷೇಕ್ ಎಲ್ಲರ ಸಿನಿಮಾಗಳು ಓಡಬೇಕು. ದರ್ಶನ್ ಅವರು ಇನ್ನಷ್ಟು ಜನ ಬೆಳೆಯಲಿ ಎಂದು ಬಯಸುತ್ತಾರೆ. ಈ ರೀತಿ ಟಾರ್ಗೆಟ್ ಮಾಡುವುದನ್ನು ನಾನು ಮಾತ್ರವಲ್ಲ, ಇಡೀ ಡಿ ಬಾಸ್ ಫ್ಯಾನ್ಸ್ ಕೂಡ ಒಪ್ಪುವುದಿಲ್ಲ ಎಂದಿದ್ದಾರೆ.