Sandalwood Leading OnlineMedia

ಸಾಯಿಪ್ರಕಾಶ್ ನೂರನೇ ಚಿತ್ರ : ಶ್ರೀ ಸತ್ಯಸಾಯಿ ಅವತಾರ ಶೀರ್ಷಿಕೆ ಅನಾವರಣ

ಕನ್ನಡ ಚಿತ್ರರಂಗದಲ್ಲಿ ಓಂ ಸಾಯಿಪ್ರಕಾಶ್ ತಾಯಿ ಸೆಂಟಿಮೆಂಟ್, ಅಣ್ಣ ತಂಗಿ ಸೆಂಟಿಮೆಂಟ್ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದವರು. ಅವರೀಗ ತಮ್ಮ ನೂರನೇ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ದೇವಮಾನವ ಪುಟ್ಟಪರ್ತಿ ಸಾಯಿಬಾಬಾ ಅವರ ಮಹಿಮೆಗಳನ್ನು ಹೇಳುವ ಕಥಾಹಂದರ ಇಟ್ಟುಕೊಂಡು ಶ್ರೀ ಸತ್ಯಸಾಯಿ ಅವತಾರ ಎಂಬ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಅವರು‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


ಕಳೆದ ಸೋಮವಾರ ಸಂಜೆ ಕಲಾವಿದರ ಸಂಘದ ಆವರಣದಲ್ಲಿ ಈ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನೆರವೇರಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಮಹರ್ಷಿ ಆನಂದ ಗುರೂಜಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು. ಸಾಯಿಗೋಲ್ಡ್ ಸರವಣ , ನಿರ್ಮಾಪಕ ಡಾ.ದಾಮೋದರ್, ಹಿರಿಯಸಾಹಿತಿ ದೊಡ್ಡರಂಗೇಗೌಡರು, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಮುಂತಾದವರು ಸಮಾರಂಭದ ಮುಖ್ಯ ಆತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎಂ. ಕೃಷ್ಣ, ಈಗಾಗಲೇ ಸಾಯಿಪ್ರಕಾಶ್ ಅವರು ಶಿರಡಿ ಸಾಯಿಬಾಬಾರ ಮೇಲೆ ಸಿನಿಮಾ ಮಾಡಿದ್ದಾರೆ. ಜೊತೆಗೆ ಅವರೇ ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಸಾಯಿಬಾಬಾರ ಆಶೀರ್ವಾದ ವಿದೆ. ನಾನು ಕೂಡ ಹತ್ತಾರುಬಾರಿ ಪುಟ್ಟಪರ್ತಿ ಗೆ ಹೋಗಿ ಸತ್ಯಸಾಯಿಬಾಬಾರ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೇನೆ. ಎಂಥವರನ್ನಾದರೂ ಮಂತ್ರಮುಗ್ಧಗೊಳಿಸುವ ಶಕ್ತಿ ಅವರಲ್ಲಿತ್ತು. ಯಾವ ಸಿಎಂ ಎದುರಿಸದಂಥ ಕಷ್ಟಕಾರ್ಪಣ್ಯಗಳು ನನ್ನ ಕಾಲದಲ್ಲಿ ಎದುರಾಗಿದ್ದವು. ರಾಜ್ ಕುಮಾರ್ ಅಪಹರಣ, ವೀರಪ್ಪನ್ ಪ್ರಕರಣ, ಕಾವೇರಿ ವಿವಾದ ಹೀಗೆ ಎಲ್ಲವೂ ನನಗೇ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿ ನೀನು ಹೆದರಬೇಡ ಧೈರ್ಯದಿಂದ ಮುನ್ನಡೆ ಎಂದು ಅಭಯ ನೀಡಿದವರು ಈ ಸತ್ಯ ಸಾಯಿಬಾಬಾ. ಅವರಲ್ಲಿದ್ದ ಮ್ಯಾಗ್ನಟಿಕ್ ಪರ್ಸನಾಲಿಟಿ ಯಾರಿಗೂ ಬರುವುದಿಲ್ಕ. ಕೆಲವೇ ದೈವಾಂಶ ಸಂಭೂತರಿಗೆ ಮಾತ್ರ ಆ ಪವರ್ ಇರುತ್ತದೆ. ಅವರೊಬ್ಬ ಪ್ರವಾದಿಗಳು, ಅವರನ್ನು ನೋಡಿದ ಕೂಡಲೇ ನಮಗೊಂದು ಎನರ್ಜಿ ಬರುತ್ತದೆ. ಅಂಥಾ ಮಹಾತ್ಮರ ಸಿನಿಮಾವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಹೊರಟಿದ್ದಾರೆ. ಅವರಿಗೆ ಯಶಸ್ಸಾಗಲಿದೆ ಎಂದರು.


ನಂತರ ಮಾತನಾಡಿದ ಮಹರ್ಷಿ ಆನಂದ ಗುರೂಜಿ ಸತ್ಯ ಸಾಯಿಬಾಬಾ ಅವರು ದೈವಾಂಶ ಸಂಭೂತರು. ಒಬ್ಬ ಸಿಎಂ ಮಾಡುವುದಕ್ಕಿಂತಲೂ ಹೆಚ್ಚಿನ ಜನಸೇವಾ ಕಾರ್ಯಗಳನ್ನು ಅವರು ಮಾಡಿದ್ದಾರೆ. ಜನರಿಗಾಗಿ ಅವರು ಕಟ್ಟಿಸಿರುವ ಆಸ್ಪತ್ರೆ, ವೈದ್ಯಕೀಯ ಸೇವೆ, ಹಸಿದು ಬಂದಂಥವರಿಗೆ ಅನ್ನ ನೀಡುವ ಕಾಯಕ ತುಂಬಾ ದೊಡ್ಡದು. ಬಾಬಾರವರು ಬೆಳೆದುಬಂದಂಥ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾನ ಆಶೀರ್ವಾದವಿದೆ. ನಾನು ೨೧ ವರ್ಷದವನಿದ್ದಾಗ ಅವರನ್ನು ನೋಡಲು ಹೋಗಿದ್ದೆ, ನನ್ನನ್ನು ನೋಡಿದಾಗ ನಮ್ಮಜೊತೆ ಬಂದುಬಿಡು ಎಂದು ಆಗಲೇ ಹೇಳಿದ್ದರು. ಅವರ ಮಾತಿನ ಮಹಿಮೆ ಎಂಥಾದ್ದೆಂದು ನನಗೀಗ ಅರ್ಥವಾಗಿದೆ ಎಂದು ಹೇಳಿದರು. ಸಾಯಿಪ್ರಕಾಶ್ ನನಗೆ ಬಹಳ ಆತ್ಮೀಯರು, ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿ ಪ್ರದಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಲಗಲಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಹೇಳಿದರು. ಜೆಜಿ ಕೃಷ್ಣ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಗಣೇಶ್ ನಾರಾಯಣ್ ಸಂಗೀತ ಸಂಗೀತ ನಿರ್ದೇಶನ‌ ಮಾಡುತ್ತಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದ್ದು, ಕಲಾವಿದರ ಆಯ್ಕೆಪ್ರಕ್ರಿಯೆ ಮುಗಿದ ನಂತರ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಚಿತ್ರ ತಂಡಕ್ಕಿದೆ.

Share this post:

Translate »