ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಣೆಗೊಳಿಸಿ ಆರೋಗ್ಯವಂತರನ್ನಾಗಿಸುವ ಸಾಮಾಜಿಕ ಕಳಕಳಿಯೊಂದಿಗೆ ರಾಜ್ಯ ಸರ್ಕಾರವು ಕೆಎಂಎಫ್(KMF) ಸಹಯೋಗದೊಂದಿಗೆ ಆರಂಭಿಸಲಾದ ಕ್ಷೀರಭಾಗ್ಯ(Ksheera Bhagya) ಯೋಜನೆಗೆ ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆರಂಭಗೊಂಡಿರುವ ಅಂತರರಾಷ್ಟ್ರೀಯ ಡೈರಿ ಫೆಡರೇಷನ್ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ, ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್, ಮಾರುಕಟ್ಟೆ ವಿಭಾಗದ ಅಪರ್ ನಿರ್ದೇಶಕ ಸತೀಶ ಅವರು ಅಂತರರಾಷ್ಟ್ರೀಯ ಡೈರಿ ಫೆಡರೇಷನ್ ಡೈರೆಕ್ಟರ್ ಜನರಲ್ ಕ್ಯಾರೋಲಿನ್ ಇಮೊಂಡ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ರಾಜ್ಯದಲ್ಲಿ ಕ್ಷೀರ ಭಾಗ್ಯ ಯೋಜನೆಯು ಈಗಾಗಲೇ 9 ವರ್ಷ ಪೂರೈಸಿದ್ದು, 10ನೇ ವರ್ಷಕ್ಕೆ ದಾಪುಗಾಲು ಹಾಕುತ್ತಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟಾರೆ 55,683 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿನ 1 ರಿಂದ 10ನೇ ತರಗತಿಯ ಅಂದಾಜು 64 ಲಕ್ಷ ವಿದ್ಯಾರ್ಥಿಗಳು ಹಾಗೂ 64 ಸಾವಿರ ಅಂಗನವಾಡಿಗಳಲ್ಲಿ 6 ತಿಂಗಳಿನಿಂದ 6 ವರ್ಷದವರೆಗಿನ 39.50 ಲಕ್ಷ ಮಕ್ಕಳು ಸೇರಿದಂತೆ ರಾಜ್ಯದ ಒಂದು ಕೋಟಿ ಮಕ್ಕಳಿಗೆ 150 ಮಿ.ಲೀ ಹಾಲನ್ನು ವಾರದಲ್ಲಿ 5 ದಿನಗಳವರೆಗೆ ನೀಡಲಾಗುತ್ತಿದೆ.
ಅಂತರಾಷ್ಟ್ರೀಯ ಡೈರಿ ಫೆಡರೇಷನ್ ಸಂಸ್ಥೆಯು ಡೈರಿ ಉದ್ಯಮದ ವಿವಿಧ ವಿಭಾಗಗಳಲ್ಲಿ ಹೊಸ ಅವಿಷ್ಕಾರ ಹಾಗೂ ಸಾಧನೆಗಳನ್ನು ಮಾಡುತ್ತಿರುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದ್ದು, ಈ ವರ್ಷ ಈ ಪ್ರಶಸ್ತಿ ಪುರಸ್ಕಾರಕ್ಕೆ 144 ದೇಶಗಳಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಕೆಎಂಎಫ್ನ ಸಾಧನೆಗಳನ್ನು ಗುರುತಿಸಿ ಚೀನಾ ಮತ್ತು ನಾರ್ವೇ ದೇಶಗಳನ್ನು ಹಿಂದಿಕ್ಕಿ ಕ್ಷೀರಭಾಗ್ಯ ಯೋಜನೆಗೆ ಇನ್ನೋವೇಷನ್ ಇನ್ ಸ್ಕೂಲ್ ಮಿಲ್ಕ್ ಪ್ರೋಗ್ರಾಮ್ಸ್ ಪ್ರತಿಷ್ಠಿತ ಪ್ರಶಸ್ತಿ ನೀಡಿದೆ.