ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಇಂದು (ಸೆಪ್ಟೆಂಬರ್ 29) ಅಖಂಡ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿರುವ ಬಂದ್ನಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳು ಮುಂದಾಗಿವೆ. ಈಗಾಗಲೇ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಸ್ಯಾಂಡಲ್ವುಡ್ ತಾರೆಯರು ಬಂದ್ಗೆ ಸಾಥ್ ನೀಡುತ್ತಿದ್ದಾರೆ. ಹೋರಾಟಕ್ಕೆ ನಟ ಶಿವರಾಜ್ ಕುಮಾರ್ ಎಂಟ್ರಿಯಾಗುತ್ತಿದ್ದು ಚಿತ್ರರಂಗದ ಮಂದಿಗೆ ಆನೆಬಲ ಬಂದಂತಾಗುತ್ತಿದೆ. ಶಿವಣ್ಣ ಜೊತೆ ಧ್ರುವ ಸರ್ಜಾ, ನಟ ಪ್ರೇಮ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ, ದುನಿಯಾ ವಿಜಯ್, ಶ್ರೀಮುರಳಿ, ವಿಜಯ್ ರಾಘವೇಂದ್ರ, ವಿನೋದ್ ಪ್ರಭಾಕರ್, ವಿನೋದ್ ರಾಜ್, ನಿಖಿಲ್ ಕುಮಾರ್, ಶ್ರುತಿ, ತಾರಾ, ಸುಧಾರಾಣಿ ಸೇರದಂತೆ ಹಲವರು ಭಾಗಿ ಆಗುತ್ತಿದ್ದಾರೆ.

ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಕನ್ನಡ ನೆಲ ಜಲ ಭಾಷೆ ವಿಚಾರ ಬಂದಾಗ ಕನ್ನಡ ಚಿತ್ರರಂಗ ಸದಾ ಬೆಂಬಲವಾಗಿ ನಿಲ್ಲುತ್ತದೆ. ಅಣ್ಣಾವ್ರ ಕಾಲದಿಂದಲೂ ಹಲವು ಹೋರಾಟಗಳಲ್ಲಿ ಚಿತ್ರರಂಗ ಭಾಗಿ ಆಗಿದೆ. ಸ್ಟಾರ್ ಕಲಾವಿದರು ಹೋರಾಟಕ್ಕೆ ಧುಮುಕುವುದರಿಂದ ಸಹಜವಾಗಿಯೇ ಹೆಚ್ಚಿನ ಬಲ ಸಿಗುತ್ತದೆ. ಅದೇ ಕಾರಣಕ್ಕೆ ಚಿತ್ರರಂಗದವರನ್ನು ಹೋರಾಟಕ್ಕೆ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಫಿಲ್ಮ್ ಚೇಂಬರ್ ಕಚೇರಿ ಪಕ್ಕದಲ್ಲಿರೋ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಬೆಳಗ್ಗೆ ಕನ್ನಡ ಚಿತ್ರರಂಗದ ತಾರೆಯರು ಮತ್ತು ತಂತ್ರಜ್ಞರು ಸಭೆ ಸೇರಲಿದ್ದಾರೆ. ಕರ್ನಾಟಕ ಬಂದ್ ಬೆಂಬಲಿಸುವಂತೆ ಕಲಾವಿದರಲ್ಲಿ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಎನ್.ಎಂ. ಸುರೇಶ್ ಮನವಿ ಮಾಡಿದ್ದರು. ನಟ ಯಶ್ ಹೊರತುಪಡಿಸಿ ಕನ್ನಡ ಚಿತ್ರರಂಗದ ಸ್ಟಾರ್ ನಟರೆಲ್ಲಾ ಈಗಾಗಲೇ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಚಿತ್ರರಂಗ ಪ್ರತಿಭಟನೆಗೆ ಸಜ್ಜಾಗಿದ್ದು ಗುರುರಾಜ ಕಲ್ಯಾಣ ಮಂಟಪದ ಬಳಿ ಅದಕ್ಕಾಗಿ ವೇದಿಕೆ ಸಿದ್ಧವಾಗಿದೆ. ಪ್ರತಿಭಟನೆಯಲ್ಲಿ 500 ಕ್ಕೂ ಹೆಚ್ಚು ಮಂದಿ ಭಾಗಿಯಾಗೋ ಸಾಧ್ಯತೆಯಿದೆ. ಟೌನ್ ಹಾಲ್ ಬಳಿ ಕಾವೇರಿ ಹೋರಾಟದಲ್ಲಿ ಶಿವರಾಜ್ ಕುಮಾರ್ ಭಾಗಿ ಆಗುವ ಸಾಧ್ಯತೆಯಿದೆ. ಇನ್ನು ಇಂದು ಯಾವುದೇ ಸಿನಿಮಾ ಚಿತ್ರೀಕರಣ ನಡೆಯುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎಲ್ಲಾ ಥಿಯೇಟರ್ಗಳು ಬಂದ್ ಆಗಲಿವೆ.

ಇದನ್ನೂ ಓದಿ: “ಗರಡಿ” ರಿಲೀಸ್ಗೆ ರೆಡಿ ; ನವೆಂಬರ್ 10 ಕ್ಕೆ ಜಗತ್ತಿನಾದ್ಯಂದ `ಗರಡಿ’ ಟೂರ್ನ್ಮೆಂಟ್!
ಸದ್ಯ ಚೆನ್ನೈನಲ್ಲಿರುವ ನಟ ಕಿಚ್ಚ ಸುದೀಪ್ ಕರ್ನಾಟಕ ಬಂದ್ ಪ್ರತಿಭಟನೆಯಲ್ಲಿ ಭಾಗಿ ಆಗುವುದಿಲ್ಲ ಎನ್ನಲಾಗ್ತಿದೆ. ವಿದೇಶ ಪ್ರಯಾಣದಲ್ಲಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಪಾಲ್ಗೊಳ್ಳುವುದು ಅನುಮಾನ. ಇನ್ನು ವೈಯಕ್ತಿಕ ಕಾರಣಗಳಿಂದ ನಟ ದರ್ಶನ್ ಹಾಗೂ ಯಶ್ ಕೂಡ ಪ್ರತಿಭಟನೆಗೆ ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ತಮಿಳುನಾಡಿಗೆ ನೀರು ಹರಿಸುವುದನ್ನ ಖಂಡಿಸಿ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ನೆಲಮಂಗಲದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ಪ್ರತಿಭಟನೆಯಲ್ಲಿ ನಟ ವಿನೋದ್ ರಾಜ್ ಭಾಗಿಯಾಗಿದ್ದಾರೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಖಾಲಿಯಾಗಿದೆ. ಬಂದ್ ಕಾರಣ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ 22 ವಿಮಾನಗಳು ಸೇರಿದಂತೆ ಒಟ್ಟು 44 ವಿಮಾನಗಳ ಸಂಚಾರ ರದ್ದಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
