ದಸರಾ ಹಬ್ಬದ ಸಂಭ್ರಮದಲ್ಲಿ ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ-ನಟನೆಯ ಈ ಚಿತ್ರಕ್ಕಾಗಿ ಅಭಿಮಾನಿಗಳ ನಿರೀಕ್ಷೆ ಗಗನಕ್ಕೇರಿದೆ.

ನಿನ್ನೆ ಹೈದರಾಬಾದ್ನಲ್ಲಿ ನಡೆದ ಅದ್ದೂರಿ ಪ್ರೀ-ರಿಲೀಸ್ ಈವೆಂಟ್ಗೆ ಟಾಲಿವುಡ್ ಟೈಗರ್ ಜೂ. ಎನ್ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ತಾರಕ್,
“ನಾನು ಮೂರು ವರ್ಷದವನಿದ್ದಾಗ, ನಮ್ಮ ತಾಯಿ ಊರು ಹಳ್ಳಿ ಕುಂದಾಪುರದ ಹತ್ತಿರ ಇದೆ ಎಂದು ಅಜ್ಜಿ ಹೇಳುತ್ತಿದ್ದರು. ಅಲ್ಲಿ ಗುಳಿಕ, ಪಂಜುರ್ಲಿ ಕುರಿತಾದ ಹಲವು ಕಥೆಗಳನ್ನು ಕೇಳಿದ್ದೆ. ಅದೆಲ್ಲಾ ನಿಜವೇ ಎಂದು ಕುತೂಹಲವಿತ್ತು. ಇವತ್ತಿಗೆ ಆ ಕಥೆಗಳ ಆಧಾರದಲ್ಲಿ ಸಿನಿಮಾ ಬರುತ್ತದೆ ಎಂದು ಭಾವಿಸಿರಲಿಲ್ಲ. ಅದನ್ನು ಪರದೆಯ ಮೇಲೆ ತಂದ ನನ್ನ ಸಹೋದರ ರಿಷಬ್ ಶೆಟ್ಟಿಗೆ ಅಭಿನಂದನೆಗಳು” ಎಂದರು.

ರಿಷಬ್ ಶೆಟ್ಟಿಯವರೂ ಸಮಾರಂಭದಲ್ಲಿ ತಮ್ಮ ಹೃದಯದ ಮಾತು ಹಂಚಿಕೊಂಡು,
“ತಾರಕ್ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ಬೆಂಬಲ ನನಗೆ ಶಕ್ತಿ. ಅವರು ನನಗೆ ಇನ್ನೊಬ್ಬ ತಾಯಿಯಿಂದ ಬಂದ ಸಹೋದರ” ಎಂದು ಬಣ್ಣಿಸಿದರು.
ಅಷ್ಟೇ ಅಲ್ಲದೆ, “ನಾನು ಅಪ್ಪಟ ಕನ್ನಡಿಗ. ಕನ್ನಡ ನನ್ನ ಹೃದಯದ ಭಾಷೆ. ಆದರೆ ತೆಲುಗು ಕೂಡ ನಮ್ಮ ಸಹೋದರ ಭಾಷೆ” ಎಂದು ಹೇಳಿ, ಭಾಷಾ ಒಗ್ಗಟ್ಟಿಗೆ ಸಂದೇಶ ನೀಡಿದರು.
