ಪ್ರಚಂಡ ಕುಳ್ಳ’ ನಟ ದ್ವಾರಕೀಶ್ ಅವರು ( ಏಪ್ರಿಲ್ 16 ) ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಸಿನಿಮಾಗಳಲ್ಲಿ ಸಾಹಸ ಮಾಡುತ್ತಿದ್ದ ದ್ವಾರಕೀಶ್ ಅವರು ರಿಯಲ್ ಲೈಫ್ನಲ್ಲಿಯೂ ಎರಡು ಮದುವೆ ಆಗಿ, ಇಬ್ಬರ ಜೊತೆಯೂ ಜೀವನ ನಡೆಸಿದ್ದರು. ಅವರ ಮೊದಲ ಪತ್ನಿ ಅಂಬುಜಾ ಅವರು 2021ರಲ್ಲಿ ನಿಧನರಾದರು. ಅವರ ಎರಡನೇ ಪತ್ನಿ ಶೈಲಜಾ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಶೈಲಜಾ ಏನು ಹೇಳಿದರು?
“ದಂಡಿ ದಂಡಿ ಪ್ರೀತಿ, ವಿಶ್ವಾಸ ತುಂಬಿದ ಮನೆಯಿದು, ಮುದ್ದಾದ ಐವರು ಮಕ್ಕಳು-ಸೊಸೆ ಎಲ್ಲರನ್ನು ಬಿಟ್ಟು ಹೋಗ್ತಿದ್ದಾರೆ. ಪ್ರೀತಿಗೆ ಇನ್ನೊಂದು ಹೆಸರೇ ಅವರು. ಎಲ್ಲರನ್ನೂ ಪ್ರೀತಿ ಮಾಡಿದವರು ಅವರು. ಅವರು ನನಗೆ ಯಾವತ್ತೂ ಮೋಸ ಮಾಡಲಿಲ್ಲ. ಅವರ ಪ್ರೀತಿ ನನಗೆ ಎಂದಿಗೂ ಇರತ್ತೆ. ದ್ವಾರಕೀಶ್ ಅವರು ಅಂಬುಜಕ್ಕನಿಗೆ ಎಷ್ಟು ಪ್ರೀತಿ ಕೊಟ್ಟರೋ ಅಷ್ಟೇ ಪ್ರೀತಿ ಕೊಟ್ಟರು. ದ್ವಾರಕೀಶ್ ನನಗೆ ಯಾವತ್ತೂ ಮೋಸ ಮಾಡಲಿಲ್ಲ, ಕಡೆಗಾಣಿಸಲಿಲ್ಲ” ಎಂದು ಶೈಲಜಾ ಹೇಳಿದ್ದಾರೆ.
ಇದನ್ನೂ ಓದಿ :ಕನ್ನಡ ಹಿರಿಯ ನಟ ದ್ವಾರಕೀಶ್ ನಿಧನ
ಪುಣ್ಯ ಮಾಡಿದ್ದೆ
“ಲೈಫ್ನಲ್ಲಿ ನಾನು ಮರೆಯೋಕೆ ಆಗದಷ್ಟು ಪ್ರೀತಿ ಕೊಟ್ಟಿದ್ದಾರೆ. ಮಕ್ಕಳಿಗೆ ನಾನು ಎರಡನೇ ತಾಯಿಯಾದ್ರೂ ಕೂಡ ಅವರು ನನಗೆ ಸ್ವಂತ ತಾಯಿ ಹಾಗೆ ಪ್ರೀತಿ ಮಾಡ್ತಾರೆ. ಮಕ್ಕಳು ನನಗೆ ಆಂಟಿ ಅಂತ ಕರೆದರೂ ಅವರು ನನ್ನನ್ನು ತುಂಬ ಪ್ರೀತಿ ಮಾಡ್ತಾರೆ. ತುಂಬ ಮುದ್ದಾದ ಮಕ್ಕಳವು. ನಾನು ಪುಣ್ಯ ಮಾಡಿದ್ದೇ” ಎಂದು ಶೈಲಜಾ ಅವರು ಹೇಳಿದ್ದಾರೆ.
ಶೈಲಜಾ ಯಾರು?
‘ಗೌರಿ ಕಲ್ಯಾಣ’ ಸಿನಿಮಾ ಟೈಮ್ನಲ್ಲಿ ಅಕ್ಕನ ಮಗಳಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಅಂತ ಶೈಲಜಾ ಅವರು ದ್ವಾರಕೀಶ್ರನ್ನು ಕೇಳಿದರು. ಅಲ್ಲಿಂದ ಸ್ನೇಹ ಬೆಳೆದು ಮದುವೆವರೆಗೆ ತಲುಪಿತ್ತು.
ಇದನ್ನೂ ಓದಿ :ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ಶಿವರಾಜ್ ಕುಮಾರ್
ಶೈಲಜಾ ಅವರು ಬಿಎಸ್ಸಿ ಓದಿದ್ದು, ಆಗಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದರು. ಎರಡನೇ ಮದುವೆ ಬಗ್ಗೆ ಪ್ರಶ್ನೆ ಎದುರಾದಾಗ ದ್ವಾರಕೀಶ್ ಅವರು “ನಾನು 2ನೇ ಮದುವೆ ಮಾಡಿಕೊಂಡಿಲ್ಲ. ಅದು ಆಯ್ತು, ಅಷ್ಟೇ. ದೈವಿಚ್ಛೆ ಇರಬೇಕು” ಎಂದು ಹೇಳಿದ್ದರು. ದ್ವಾರಕೀಶ್ಗೆ ಎರಡನೇ ಮದುವೆ ಆದಾಗ ಅವರ ವಯಸ್ಸು 51.
ನಿರ್ದೇಶನ, ಚಿತ್ರ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದ ದ್ವಾರಕೀಶ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಹಾಗೂ ಕನ್ನಡ ಚಿತ್ರರಗಂದಲ್ಲಿ ಹಲವು ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದರು. ಬುಧವಾರ ಬೆಳಗ್ಗೆ 7 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಾಮರಾಜಪೇಟೆಯ ಟಿ.ಆರ್. ಮಿಲ್ ಚಿತಾಗಾರದಲ್ಲಿಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ದ್ವಾರಕೀಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಕ್ಷೇತ್ರದ ಗಣ್ಯರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.