ಅಭಿಮಾನಿಗಳ ನಿರೀಕ್ಷೆಗೆ ತೆರೆ ಎಳೆದಿರುವ ದುನಿಯಾ ವಿಜಯ್, ‘ಮಾರುತ’ ಸಿನಿಮಾದಲ್ಲಿ ತಾವು ನಾಯಕನಲ್ಲವೆಂದು ತಿಳಿಸಿದರು.
“ನಿರ್ಮಾಪಕ ಕೆ. ಮಂಜು ಹಾಗೂ ನಿರ್ದೇಶಕ ಎಸ್. ನಾರಾಯಣ್ ಅವರ ಮೇಲೆ ನನಗೆ ಅಪಾರ ಗೌರವ ಮತ್ತು ಅಭಿಮಾನವಿದೆ. ಈ ಕಾರಣಕ್ಕೆ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ನಾಯಕನಲ್ಲ. ಶ್ರೇಯಸ್ ಮಂಜು ಅವರನ್ನು ಚಿಕ್ಕ ವಯಸ್ಸಿನಿಂದ ಬಲ್ಲೆ, ಅವರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿ ಸೇರಿದ್ದೇನೆ,” ಎಂದು ವಿಜಯ್ ಸ್ಪಷ್ಟನೆ ನೀಡಿದರು.
‘ಲ್ಯಾಂಡ್ ಲಾರ್ಡ್’ನಲ್ಲಿ ಬ್ಯುಸಿ ವಿಜಯ್
ಕನ್ನಡದಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾದ ಚಿತ್ರೀಕರಣವನ್ನು ದುನಿಯಾ ವಿಜಯ್ ಮುಗಿಸಿದ್ದು, ಚಿತ್ರ ಇದೀಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಹಿಂದೆಂದೂ ಮಾಡದ ವಿಭಿನ್ನ ಪಾತ್ರದಲ್ಲಿ ಅವರು ನಟಿಸಿದ್ದು, ಪುತ್ರಿ ರಿತಾನ್ಯ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಸಾರಥಿ’ ಖ್ಯಾತಿಯ ಕೆ.ವಿ. ಸತ್ಯ ಪ್ರಕಾಶ್ ಹಾಗೂ ಕೆ.ಎಸ್. ಸೂರಜ್ ಗೌಡ ನಿರ್ಮಿಸುತ್ತಿರುವ ಈ ಚಿತ್ರವನ್ನು, ‘ಕಾಟೇರೆ’ ಕಥೆಗಾರ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿದ್ದಾರೆ. 1990ರ ಹಳ್ಳಿಯೊಂದರಲ್ಲಿ ನಡೆಯುವ ತಂದೆ-ಮಗಳ ಭಾವನಾತ್ಮಕ ಕಥೆಯಾಗಿದೆ. ಈ ಸಿನಿಮಾ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.
ತಮಿಳು-ತೆಲುಗು ಕಡೆಗೂ ಗಮನ
ಕನ್ನಡದೊಂದಿಗೆ ತಮಿಳು, ತೆಲುಗು ಚಿತ್ರರಂಗದಲ್ಲಿಯೂ ದುನಿಯಾ ವಿಜಯ್ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಚೆನ್ನೈನಲ್ಲಿ ತಮಿಳು ಸಿನಿಮಾ ‘ಮುಕುತಿ ಅಮ್ಮನ್ 2’ ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದಾರೆ. ಜನಪ್ರಿಯ ನಿರ್ದೇಶಕ ಸುಂದರ್ C ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಅಲ್ಲದೆ ತೆಲುಗು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಹೊಸ ಸಿನಿಮಾದಲ್ಲೂ ದುನಿಯಾ ವಿಜಯ್ ನಟಿಸುತ್ತಿದ್ದು, ಅದರಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
