Sandalwood Leading OnlineMedia

ಹೀರೋ ಕನಸಿನ ಬೆನ್ನತ್ತಿ ಹೊರಟ ʻದೂರದರ್ಶನʼದ ರಾಮ..!

ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ.. ಈ ಮಾತು ಕೇಳುವುದಕ್ಕೆ ಅದೆಷ್ಟು ಚೆಂದ ಅನ್ನಿಸುತ್ತೆ ಅಲ್ವಾ. ಒಂದು ಸಮಯದಲ್ಲಿ ಡಾಲಿ ಧನಂಜಯ್ ಅವರಿಂದ ಬಂದ ಈ ಮಾತು ಸಿಕ್ಕಾಪಟ್ಟೆ ಟ್ರೆಂಡಿಂಗ್ ಆಗಿತ್ತು. ಆದರೆ ಬೆಳೆಸುವವರು ಯಾರಯ್ಯಾ ಎಂಬ ಪ್ರಶ್ನೆ ಅದೆಷ್ಟೋ ಜನರನ್ನು ಕಾಡುತ್ತದೆ. ಅದರಲ್ಲೂ ಸಿನಿಮಾ ಇಂಡಸ್ಟಿçಗೆ ಸಾವಿರಾರು ಕನಸುಗಳನ್ನು ಹೊತ್ತು, ನಾನಾ ತರಬೇತಿಯನ್ನು ಪಡೆದು, ಸ್ವಯಂ ಕಲಿಕೆಯನ್ನು ಕಲಿತು ಬಂದ ಕಲಾವಿದರಿಗೂ ಅವಕಾಶ ಸಿಗುವುದು ಕಷ್ಟವೇ ಸರಿ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ವಿಜಯಪುರ ಜಿಲ್ಲೆಯ ಪುಟ್ಟ ಗ್ರಾಮದ ರಾಮ ಎಂಬ ಕಲಾವಿದನ ಜೀವನ ಶೈಲಿ. ಸದ್ಯ ಇಂಡಸ್ಟಿçಯಲ್ಲಿ ಹಲವು ವರ್ಷಗಳಿಂದ ಕಲ್ಲು ಮುಳ್ಳಿನ ಹಾದಿ ತುಳಿದು, ಇತ್ತಿಚೆಗಷ್ಟೇ ರಿಲೀಸ್ ಆದ ದೂರದರ್ಶನ ಎಂಬ ಸಿನಿಮಾ ಮೂಲಕ ಎಲ್ಲರೂ ಗುರುತಿಸುವಂತ ಪಾತ್ರ ಮಾಡಿದವರು ರಾಮ. ಇವರು ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಶೆಳ್ಳಗೆ ಎಂಬ ಪುಟ್ಟ ಹಳ್ಳಿಯವರು. ಮನೆಯಲ್ಲಿ ಯಾರೂ ಕೂಡ ಕಲೆಯಲ್ಲಿ ಇರುವವರಲ್ಲ. ಅಪ್ಪ-ಅಮ್ಮನಿಗೆ ರಾಮ ಒಬ್ಬರನೇ ಮಗ. ಒಂದು ಮುದ್ದಾದ, ಮಧ್ಯಮ ವರ್ಗದ ಕುಟುಂಬ. ರಾಮ ತಂದೆ-ತಾಯಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದವರು. ಹೀಗಾಗಿ ತಮಗೆ ಕಷ್ಟವಾದರೂ ರಾಮ ಅವರಿಗೆ ಶಿಕ್ಷಣ ಕೊಡಿಸಿದರು. ಕಲೆಯ ಮೆಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ರಾಮ್‌ಗೆ ವಿದ್ಯೆ ಅಷ್ಟು ಸುಲಭಕ್ಕೆ ತಲೆಗೆ ಹತ್ತಲಿಲ್ಲ. ಡಿಪ್ಲೋಮೋ ಮುಗಿಸಿ, ಇಂಜಿನಿಯರಿAಗ್ ಸೇರಿದ ರಾಮ, ಅರ್ಧಕ್ಕೆ ಬಿಟ್ಟು ಬೆಂಗಳೂರು ಸೆರಿದರು. ಕೋರ್ಸ್ ಮಾಡುತ್ತೀನಿ ಎಂದು ಹೇಳಿ ಬೆಂಗಳೂರಿನ ದಾರಿ ಹಿಡಿದ ರಾಮ, ಮಾಡಿದ್ದು ಮಾತ್ರ ಅಭಿನಯ ಶಾಲೆ ಕಡೆಗೆ ಹೊರಟಿದ್ದು.


ಅಭಿನಯ ತರಂಗ ಎಂಬ ನಾಟಕರಂಗಕ್ಕೆ ಸೇರ್ಪಡೆಯಾದರು. ಎರಡು ವರ್ಷದ ಕೋರ್ಸ್ ಅದು. ಅದು ಮುಗಿಯುವುದರೊಳಗೆ ಒಂದಷ್ಟು ನಾಟಕಗಳನ್ನು ಮಾಡಿದ್ದರು. ೩೦ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ಮಾಡಿದರು. ಎರಡು ವರ್ಷ ಕೋರ್ಸ್ ಮುಗೀತು. ಅಲ್ಲಿಂದ ಹೊರಗೆ ಬಂದ ಮೇಲೆ ರಾಮಗೆ ಗೊತ್ತಾಗಿತ್ತು, ಸಿನಿಮಾ ಎಂಬ ಕಲರ್‌ಫುಲ್ ಜಗತ್ತು ಹೇಗಿದೆ, ಅಲ್ಲಿನ ಬದುಕು ಕಟ್ಟಿಕೊಳ್ಳುವುದು ಎಷ್ಟು ಕಷ್ಟ ಎಂಬ ಕಟು ಸತ್ಯ ದೂರದಿಂದ ನೋಡಿದಾಗಲೇ ಅರಿವಿಗೆ ಬಂದಿತ್ತು. ಕಲಾವಿದನಾಗಬೇಕೆಂಬುದು ಮನಸ್ಸಿನ ಆಸೆ. ಆದರೆ ಆಸೆಗಳು ಹೊಟ್ಟೆತುಂಬಿಸುವುದಿಲ್ಲ, ಹಸಿವಾದಾಗ ಆಹಾರವೇ ಬೇಕು. ಹೀಗಾಗಿ ರಾಮ, ಅಲ್ಲಿಂದ ಕಲೆಯ ಜೊತೆಗೆ, ಹೊಟ್ಟೆಪಾಡಿಗಾಗಿ ಒಂದಷ್ಟು ಕೆಲಸಗಳನ್ನು ಮಾಡುವುದಕ್ಕೂ ಆರಂಭಿಸಿದರು. ಈ ರೀತಿಯ ಕೆಲಸವನ್ನು ನಾನು ಮಾಡಬೇಕಾ ಎಂಬ ಯಾವ ಮುಜುಗರವನ್ನು ಮಾಡಿಕೊಳ್ಳದೆ, ಚಿಕ್ಕ ಪುಟ್ಟ ಆರ್ಟ್ಸ್ ಕೆಲಸಗಳು, ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಇತ್ತ ಬೆಂಗಳೂರಿನಲ್ಲಿ ಈ ರೀತಿಯ ಜೀವನವನ್ನು ರಾಮ ಸಾಗಿಸುತ್ತಿದ್ದರೆ, ಅತ್ತ ದುರದೂರಿನ ಪುಟ್ಟ ಹಳ್ಳಿಯಲ್ಲಿ ಕುಳಿತಿದ್ದ ತಂದೆ-ತಾಯಿ ಮಗ ಯಾವುದೋ ಕೋರ್ಸ್ ಮಾಡುತ್ತಿದ್ದಾನೆ ಎಂದುಕೊಂಡು ಸಮಾಧಾನ ಮಾಡಿಕೊಂಡು, ದೇವರಲ್ಲಿ ಮಗನ ಯಶಸ್ಸಿಗೆ ಹಾರೈಸುತ್ತಿದ್ದರು.

* ದೂರದರ್ಶನವೇ ಟರ್ನಿಂಗ್ ಪಾಯಿಂಟ್

೨೦೧೫ರಿಂದ ೨೦೧೮ರ ತನಕವೂ ರಾಮರಿಗೆ ಸಿಕ್ಕ ಸಿಕ್ಕ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದರು. ಅದೇ ವೇಳೆಗೆ ರಾಮರಿಗೆ ಉಗ್ರಂ ಮಂಜು ಹಾಗೂ ಸುಖೇಶ್ ಶೆಟ್ಟಿ ಅವರ ಪರಿಚಯವಾಗುತ್ತದೆ. ಸುಖೇಶ್ ಶೆಟ್ಟಿ ಆಗ ತಾನೆ `ದೂರದರ್ಶನ’ ಸಿನಿಮಾ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿರುತ್ತದೆ. ಆಗ ಸುಖೇಶ್ ಅವರಿಂದ ರಾಮಗೆ ಸಿನಿಮಾದಲ್ಲಿ ಅದ್ಭುತ ಪಾತ್ರವನ್ನು ನೀಡುತ್ತಾರೆ. ಆ ಪಾತ್ರದಿಂದಾನೇ ಈಗ ಎಲ್ಲರೂ ಗುರುತಿಸುವಂತೆ ಆಗಿದೆ. ಇದಕ್ಕೆ ರಾಮ ತುಂಬಾ ಖುಷಿ ಪಟ್ಟಿದ್ದಾರೆ. ಹಾಗೇ ಸುಖೇಶ್ ಹಾಗೂ ಉಗ್ರಂ ಮಂಜು ಅವರಿಗೂ ಧನ್ಯವಾದ ತಿಳಿಸಿದ್ದಾರೆ. `ದೂರದರ್ಶನ’ ಸಿನಿಮಾದಲ್ಲಿ ರಾಮ ಅಭಿನಯಿಸಿದ ಬಳಿಕ ಅವರ ಸರ್ಕಲ್‌ನಲ್ಲಿಯೂ ಎಲ್ಲರೂ ಗುರುತು ಹಿಡಿಯುತ್ತಿದ್ದಾರೆ. ಅವರ ನಟನೆಗೆ ಶಬ್ಬಾಶ್ ಎನ್ನುತ್ತಿದ್ದಾರೆ. ದೂರದರ್ಶನ ಆದ ಮೇಲೆ ಹೆಸರು ಬಂದಷ್ಟೇ ಸುಲಭದಲ್ಲಿ ಒಂದಷ್ಟು ಅವಕಾಶಗಳು ಅರಸಿ ಬರುತ್ತಿವೆ. ಸುಖೇಶ್ ಅಣ್ಣನ ಮುಂದಿನ ಸಿನಿಮಾ `ಪೀಟರ್’ನಲ್ಲಿ ಹಾಗೂ ಧರ್ಮಣ್ಣ ಕಡೂರು ಅವರ `ಹಂಪಿ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿ ನಾನು ಕೂಡ ಲೀಡ್ ರೋಲ್‌ನಲ್ಲಿ ಮಾಡುತ್ತಿದ್ದೀನಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ರಾಮ.‌

ಆದರೆ ಬೆಂಗಳೂರಿಗೆ ಮನೆಯಲ್ಲಿ ಸುಳ್ಳು ಹೇಳಿ ಬಂದಿದ್ದ ರಾಮರಿಗೆ ಜೀವನ ಸುಲಭವಾಗಿ ಸಾಗಿತ್ತಾ ಎಂದರೆ ಖಂಡಿತ ಇಲ್ಲ. ಸಿಲಿಕಾನ್ ಸಿಟಿ ಎಲ್ಲರಿಗೂ ಜಾಗ ಕೊಡುತ್ತೆ, ಆದರೆ ಅವಕಾಶವನ್ನು ಅವರೇ ಹುಡುಕಿಕೊಳ್ಳಬೇಕು, ದುಡಿಮೆಯನ್ನು ಅವರೇ ಮಾಡಬೇಕು. ರಾಮ್ ಅದೃಷ್ಟಕ್ಕೆ ಬೆಂಗಳೂರಿನಲ್ಲಿ ಸ್ನೇಹಿತರಿದ್ದರು. ಊರು ಬಿಟ್ಟು ಏನಾದರೂ ಸಾಧಿಸಬೇಕು ಎಂದಾಗ ರಾಮರಿಗೆ, ಪ್ರಮೋದ್ ಹಾಗೂ ಅಕ್ಷಯ್ ಎಂಬ ಸ್ನೇಹಿತರು ಬೆನ್ನೆಲುಬಾಗಿ ನಿಂತರು. ಹಣದ ವಿಚಾರ, ಉಳಿದುಕೊಳ್ಳುವುದಕ್ಕೆ ಸಹಾಯ ಸೇರಿದಂತೆ ರಾಮ್ ಸಹಾಯಕ್ಕೆ ನಿಂತರು. ಇವರಿಬ್ಬರನ್ನು ರಾಮ ತನ್ನ ಎರಡನೇ ತಾಯಿ ಅಂತಾನೆ ಹೇಳುತ್ತಾರೆ. ಕಷ್ಟಕಾಲ, ಫ್ರೆಂಡ್ಸ್ ಸಹಾಯ ಮಾಡುತ್ತಾರೆ ಅಂತ ರಾಮ ಸುಮ್ಮನೆ ಕೂತವರೇ ಅಲ್ಲ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಆಕ್ಟಿಂಗ್ ಅವಕಾಶಗಳ ಕಡೆಗೂ ಗಮನ ಕೊಟ್ಟಿದ್ದರು. ಒಂದು ದಿನ ಹಿರಿಯ ನಟ ಶ್ರೀನಾಥ್ ಅವರ `ಮಾನಸ ಸರೋವರ’ ಧಾರಾವಾಹಿಯಲ್ಲಿ ರಾಮ ಕೂಡ ಒಂದು ಪಾತ್ರ ಮಾಡಿದ್ದರು. ಊರಲ್ಲಿ ಯಾವುದೋ ಕೋರ್ಸ್ ಮಾಡುತ್ತೀನಿ ಅಂತ ಸುಳ್ಳು ಹೇಳಿದ್ದನ್ನೆ ನಂಬಿಕೊಂಡು ಕೂತಿದ್ದ ತಂದೆ-ತಾಯಿ ಆ ಸೀರಿಯಲ್‌ನಲ್ಲಿ ಮಗನನ್ನು ನೋಡಿದ್ದಾರೆ. ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಕರೆ ಮಾಡಿದಾಗ ರಾಮ ಸತ್ಯ ಒಪ್ಪಿಕೊಂಡಿದ್ದಾರೆ. ಆದರೆ ಅಪ್ಪ ಅಮ್ಮನಿಂದ ರಾಮಗೆ ನಿರೀಕ್ಷೆ ಮಾಡದಂತ ಸಪೋರ್ಟ್ ಸಿಕ್ಕಿದೆ. ನೀನು ಮಾಡು ಮಗನೇ ಅಂತ ಬೆನ್ನು ತಟ್ಟಿ ಹಾರೈಸಿದ್ದಾರೆ.

ಸಿನಿಮಾ- ಸೀರಿಯಲ್‌ನಲ್ಲಿ ಬೆಳೆದಂತ ಸ್ಟಾರ್‌ಗಳನ್ನು ನೋಡಿದ್ದಂತ ಆ ಮುಗ್ಧ ಜೀವಗಳು ಎರಡು ವರ್ಷದಲ್ಲಿ ನನ್ನ ಮಗನಿಗೂ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂದೇ ಭಾವಿಸಿದ್ದರು. ಕೋವಿಡ್ ದೆಷ್ಟೋ ಜನರ ಬದುಕಲ್ಲಿ ಆಟವಾಡಿದೆ. ರಾಮ ಅವರ ಬದುಕಲ್ಲೂ ಸುಮ್ಮನೆ ಇರಲಿಲ್ಲ. `ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾ ಮುಗಿದ ಕೂಡಲೇ ಲಕ್ಡೌನ್ ಆಗಿತ್ತು. ಬೆಂಗಳೂರಿನಲ್ಲಿ ಉಳಿದುಕೊಂಡು ಬಾಡಿಗೆ ಕಟ್ಟುವಷ್ಟು ಅನುಕೂಲ ರಾಮ ಅವರಿಗೆ ಇರಲಿಲ್ಲ. ಇಲ್ಲಿಮದ ಸೀದಾ ಊರಿನ ಹಾದಿ ಹಿಡಿದರು. ಊರಿನಲ್ಲಿ ಯೋಚಿಸಿದಾಗ ಈ ಇಂಡಸ್ಟಿçಯೇ ಬೇಡ ಎಂಬಂತೆ ಯೋಚನೆ ಮಾಡಿದದ್ರು. ಆದರೆ ಅವರ ತಾಯಿ ಮತ್ತೊಮ್ಮೆ ಧೈರ್ಯ ತುಂಬಿದರು. ಇದೆಲ್ಲ ಎರಡು ತಿಂಗಳಲ್ಲಿಯೇ ಮುಗಿದು ಹೋಗುತ್ತದೆ. ತಲೆಗೆ ಹಚ್ಚಿಕೊಳ್ಳಬೇಡ ಎಂದು ಹೇಳಿ ಕಳುಹಿಸಿದಾಗ, ಅಮ್ಮನ ಮಾತಿನಿಂದ ಪ್ರಯತ್ನ ಮುಂದುವರೆಸಿದ ರಾಮ್‌ಗೆ ಸಕ್ಸಸ್ ಎಂಬುದು, ಅವಕಾಶಗಳು ಎಂಬುದು ಸುಲಭವಾಗಿ ಸಿಗಲಿಲ್ಲ. ಬಳಿಕ ಅವರ ತಂದೆ-ತಾಯಿ ಈ ಫೀಲ್ಡ್ ಬೇಡಪ್ಪ. ಮದುವೆ ಆಗಬೇಕು, ಜೀವನ ನಡೆಸಬೆಕು ಎಂದಿದ್ದರಂತೆ. ಆದರೆ ಮಗನ ಆಸೆಗೂ ಅಡ್ಡಿ ಮಾಡುವುದಕ್ಕೆ ಇಷ್ಟವಿಲ್ಲದೆ ಸುಮ್ಮನೆ ಆಗಿದ್ದಾರೆ.

ದೂರದರ್ಶನ ಆದ್ಮೇಲೆ ಅವಕಾಶಗಳು ಅರಸಿ ಬರುತ್ತಿವೆ. ಸದ್ಯಕ್ಕೆ ಸಿನಿಮಾಗೆ ಏನೆಲ್ಲಾ ಅಗತ್ಯವಿದೆ ಆ ಕಲೆಯನ್ನು ಯಾವಾಗಲೂ ಪ್ರಾಕ್ಟೀಸ್ ಮಾಡುತ್ತಾ ಇರುತ್ತಾರೆ. ಮನೆಯಲ್ಲಿಯೇ ವರ್ಕೌಟ್ ಕೂಡ ಮಾಡುತ್ತಾ ಇರುತ್ತಾರೆ. ಹೀರೋ ಆಗಲೇಬೇಕೆಂದು ದೊಡ್ಡ ಕನಸಿನೊಂದಿಗೆ ಪ್ರಯತ್ನವನ್ನು ಮುಮದುವರೆಸಿರುವ ರಾಮ ಅವರಿಗೆ `ಚಿತ್ತಾರ’ ಕಡೆಯಿಂದ ಆಲ್ ದಿ ಬೆಸ್ಟ್.

Share this post:

Translate »