ಸ್ಯಾಂಡಲ್ವುಡ್ ನಟ ದರ್ಶನ್ ಅವರಿಗೆ ಸೋದರಳಿಯ ಚಂದನ್ ಕುಮಾರ್ ಎಂದರೆ ವಿಶೇಷವಾಗಿಯೇ ಅಚ್ಚುಮೆಚ್ಚು. ಸದಾ ದರ್ಶನ್ ಜೊತೆಗೇ ಕಾಣಿಸಿಕೊಂಡಿದ್ದ ಚಂದು, ಈಗ ಮೈಸೂರಿನಲ್ಲಿ ಫುಡ್ ಸ್ಟಾಲ್ ಆರಂಭಿಸಿ ಸುದ್ದಿಯಲ್ಲಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಚಂದು ‘ನೆಮ್ಮದಿಯಾಗಿ ಊಟ ಮಾಡಿ’ ಎಂಬ ಹೆಸರಿನ ನಾನ್ವೆಜ್ ಹೋಟೆಲ್ ಸ್ಟಾಲ್ ತೆರೆಯಲಾಗಿದೆ. ಇದು ಶಾಶ್ವತ ಹೋಟೆಲ್ ಅಲ್ಲ, ದಸರಾ ಮೇಳದ ಅವಧಿಗೆ ಮಾತ್ರ ವ್ಯವಸ್ಥೆ ಮಾಡಲಾಗಿದೆ.

ಮೈಸೂರಿನವರಾದ ದರ್ಶನ್ ಅವರಿಗೆ ಆ ಊರಿನ ಮೇಲೆ ಅಪಾರ ಪ್ರೀತಿ. ಪ್ರತೀ ವರ್ಷ ದಸರಾ ವೇಳೆ ಮೈಸೂರಿಗೆ ತೆರಳುತ್ತಿದ್ದ ಅವರು, ಈ ಬಾರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಇದ್ದಾರೆ. ಇದರಿಂದ ಅವರ ಅಭಿಮಾನಿಗಳು ನಿರಾಶರಾಗಿದ್ದಾರೆ. ಇದೇ ಸಮಯದಲ್ಲಿ ಚಂದು ಫುಡ್ಸ್ಟಾಲ್ ಆರಂಭಿಸಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಚಂದು ಸ್ವತಃ ಸ್ಟಾಲ್ ಮುಂದೆ ನಿಂತು ಗ್ರಾಹಕರನ್ನು ಕರೆಯುತ್ತಿರುವುದು ಕಂಡುಬಂದಿದೆ. ಅನೇಕ ಅಭಿಮಾನಿಗಳು ಅವರನ್ನು ಗುರುತಿಸಿ ಮಾತನಾಡಿ ಮುಂದೆ ಸಾಗಿದ್ದಾರೆ. ಕೆಲವರು ಅಲ್ಲಿ ಊಟ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
