ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 130 ದಿನಗಳಿಂದ ಜೈಲಿನಲ್ಲಿದ್ದರು. ಬೆನ್ನು ನೋವು ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದ ಅವರು ಈಗ ಆಸ್ಪತ್ರೆಯಲ್ಲಿದ್ದಾರೆ. ಇಂದು ಹೈಕೋರ್ಟ್ನಲ್ಲಿ ಜಾಮೀನು ಅರ್ಜಿಯ ತೀರ್ಪು ಪ್ರಕಟವಾಗಲಿದೆ. ಈ ತೀರ್ಪು ಸಿನಿಮಾ ಭವಿಷ್ಯವನ್ನು ನಿರ್ಧರಿಸಲಿದೆ. ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿ 130 ದಿನಗಳ ಮೇಲಾಗಿದ್ದವು. ಆ ಬಳಿಕ ಅವರು ಬೆನ್ನು ನೋವಿನ ಕಾರಣ ನೀಡಿ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಆಸ್ಪತ್ರೆ ಸೇರಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ಈ ಕೇಸ್ನ ಕಾರಣದಿಂದ ಅವರು ಒಪ್ಪಿಕೊಂಡ ಸಿನಿಮಾಗಳು ಸಂಕಷ್ಟದಲ್ಲಿ ಇವೆ. ಇಂದು (ಡಿಸೆಂಬರ್ 13) ಅವರಿಗೆ ಪ್ರಮುಖ ದಿನ ಆಗಲಿದೆ. ದರ್ಶನ್ಗೆ ಜಾಮೀನು ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಇದರ ಜೊತೆಗೆ ಸಿನಿ ಭವಿಷ್ಯವೂ ಇಂದೇ ನಿರ್ಧಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 45 ದಿನಗಳೆದರೂ ಇಲ್ಲ ಆಪರೇಷನ್; ಮತ್ತೆ ಸಂಕಷ್ಟದಲ್ಲಿ ದರ್ಶನ್?!
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕಳೆದ ಕೆಲ ವಾರಗಳಿಂದ ನಡೆಯುತ್ತಿತ್ತು. ದರ್ಶನ್ ಪರವಾಗಿ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ದರ್ಶನ್ ಅವರನ್ನು ಈ ಪ್ರಕರಣದಲ್ಲಿ ಸಿಕ್ಕಿಸಲಾಗಿದೆ ಎಂದು ಹೇಳಿದ್ದಾರೆ. ಅತ್ತ, ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ದರ್ಶನ್ ಅವರು ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳು ಸಿಕ್ಕಿವೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಸದ್ಯ ಕೋರ್ಟ್ ಎರಡೂ ಕಡೆಯ ವಾದವನ್ನು ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಇಂದು ಮಧ್ಯಾಹ್ನ 2:30ರ ಸುಮಾರಿಗೆ ತೀರ್ಪನ್ನು ನೀಡಲಿದೆ. ಸದ್ಯ ದರ್ಶನ್ ಅವರು ಆಸ್ಪತ್ರೆಯಿಂದಲೇ ಟೆನ್ಷನ್ನಲ್ಲಿ ಇದಕ್ಕಾಗಿ ಕಾಯುತ್ತಿದ್ದಾರೆ. ಇದು ದರ್ಶನ್ ಅವರ ಸಿನಿ ಭವಿಷ್ಯವನ್ನೂ ನಿರ್ಧರಿಸಲಿದೆ.
ದರ್ಶನ್ ಅವರು ‘ಡೆವಿಲ್’ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದರು. ಈ ಸಿನಿಮಾದ ಶೂಟ್ ನಡೆಯುವಾಗಲೇ ಅವರು ಅರೆಸ್ಟ್ ಆಗಬೇಕಾಯಿತು. ಒಂದೊಮ್ಮೆ ಇಂದು ಜಾಮೀನು ಸಿಕ್ಕರೆ ದರ್ಶನ್ ಶೂಟಿಂಗ್ಗೆ ಮರಳಬಹುದು. ಆದರೆ, ಇಂದೂ ಜಾಮೀನು ಸಿಕ್ಕಿಲ್ಲ ಎಂದರೆ ಸಿನಿಮಾದ ಕೆಲಸ ಆರಂಭ ಆಗೋದು ಮತ್ತಷ್ಟು ವಿಳಂಬ ಆಗಲಿದೆ. ಅವರು ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ. ದರ್ಶನ್ ಅವರು ಶಸ್ತ್ರಚಿಕಿತ್ಸೆಗಾಗಿ ಜಾಮೀನು ಪಡೆದಿದ್ದಾರೆ. ಆದರೆ, ಈವರೆಗೆ ಅದನ್ನು ಮಾಡಿಸಿಕೊಂಡಿಲ್ಲ. ಇದಕ್ಕೆ ನಾನಾ ಕಾರಣಗಳನ್ನು ಅವರ ಪರ ವಕೀಲರು ನೀಡುತ್ತಿದ್ದಾರೆ. ಇಂದು ಜಾಮೀನು ಸಿಕ್ಕರೆ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳೋದು ಅನಿವಾರ್ಯ ಆಗಲಿದೆ. ದರ್ಶನ್ ಅಲ್ಲದೇ ಎ1 ಆರೋಪಿ ಪವಿತ್ರಾಗೌಡ, ಉಳಿದ ಆರೋಪಿಗಳಾದ ಲಕ್ಷ್ಮಣ್, ನಾಗರಾಜ್, ಅನುಕುಮಾರ್, ಜಗದೀಶ್, ಪ್ರದೂಷ್ ಜಾಮೀನು ತೀರ್ಪನ್ನು ಕೋರ್ಟ್ ಪ್ರಕಟಿಸಲಿದೆ. ಯಾರಿಗೆ ಜಾಮೀನು ಸಿಗುತ್ತದೆ, ಯಾರು ಮತ್ತೆ ಜೈಲುವಾಸ ಮುಂದುವರಿಸಬೇಕಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.