ವೇದಿಕೆಯ ಮೇಲೆ ಸಂಗೀತ ಮಾತ್ರಿಕರು ಸಂಗೀತ ಸಾಧನೆಯ ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಿದ್ದರೆ. ಸಭಿಕರಲ್ಲಿ ಸಂತಸ, ಸಂಭ್ರಮ, ಅಭಿಮಾನಿಗಳ ಮುಖದಲ್ಲಿ ತೃಪ್ತ ಭಾವ. ನಡು ನಡುವೆ ಕಣ್ಮನ ಸೆಳೆಯುವ ಹಾಡು-ನೃತ್ಯ ಪ್ರದರ್ಶನ.ನಗರದ ಅರಮನೆ ಮೈದಾನದಲ್ಲಿ ವರ್ಣರಂಜಿತ ಅದ್ದೂರಿ ವೇದಿಕೆಯಲ್ಲಿ ಶುಕ್ರವಾರ ನಡೆದ ಚಿತ್ತಾರ ಮ್ಯೂಸಿಕ್ ಅವಾರ್ಡ್-2025 ಪ್ರಶಸ್ತಿ ಪ್ರದಾನ ಸಮಾರಂಭದ ಸೊಬಗು ಹೀಗಿತ್ತು.
ಜೀವಮಾನದ ಪ್ರಶಸ್ತಿ ಪ್ರದಾನ, 30ಕ್ಕೂ ಹೆಚ್ಚು ವಿಭಾಗಗಳಲ್ಲಿ ಸಂಗೀತ ಸಾಧನೆಗೆ ಪ್ರಶಸ್ತಿ ಪ್ರದಾನ, ಸಾಹಿತ್ಯ, ಸಂಗೀತ, ರಾಜಕೀಯ, ಸಿನಿಮಾ ಸಹಿತ ವಿವಿಧ ರಂಗಗಳ ಪ್ರಮುಖರು, ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಮಾಡಿ ಎಲ್ಲರಿಗೂ ಹುರುಪು ತುಂಬಿದರು.
ರೆಡ್ ಕಾರ್ಪೆಟ್ ಮೇಲೆ ವೈಯ್ಯಾರದಿಂದ ಹೆಜ್ಜೆ ಹಾಕಿದ ತಾರೆಯರು, ವೇದಿಕೆಗೇರಿ ಪ್ರಶಸ್ತಿ ತಮ್ಮದಾಗಿಸಿಕೊಂಡ ಪ್ರತಿಭೆಗಳ ಭಾವುಕ ಮಾತುಗಳು. ಅನುರಾಗ್ ಹಾಗೂ ಅನುಪಮ ಗೌಡ ಅವರ ಚಂದದ ನಿರೂಪಣೆ ಸಮಾರಂಭದ ಮೆರಗು ಹೆಚ್ಚಿಸಿತು.
ವಿವಿಧ ವಿಭಾಗಗಳಲ್ಲಿ ಭವ್ಯ ಪರದೆಯಲ್ಲಿ ಪ್ರಶಸ್ತಿ ನಾಮನಿರ್ದೇಶಿತರ ಹೆಸರು ಬರುವಾಗ ಹಲವರಿಗೆ ಕುತೂಹಲ ಮತ್ತು ದುಗುಡ ಒಟ್ಟೋಟ್ಟಿಗೆ ಉಂಟಾಯಿತು. ವಿಜೇತರ ಹೆಸರು ಘೋಷಣೆ ಆಗುತ್ತಿದ್ದಂತೆ ವಿಜೇತರು ಸಂಭ್ರಮಿಸಿದರೆ, ಉಳಿದವರು ಕೈಕುಲುಕಿ ಅಭಿನಂದನೆ ಸಲ್ಲಿಸಿದರು.
‘ಚಿತ್ತಾರ Promising singer – Male-2025
ಕನ್ನಡದ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸುವುದರಲ್ಲಿ ಅರ್ಜುನ್ ಜನ್ಯ ಸದಾ ಮುಂದು. ಹಾಗೆ ಅವರಿಂದಲೇ ಸಿನಿಮಾರಂಗಕ್ಕೆ ಪರಿಚಯವಾದ ಯುವಗಾಯಕ ಸುನೀಲ್ ಗುಜಗೊಂಡ. ಕನ್ನಡದ ರಿಯಾಲಿಟಿ ಶೋ ಮೂಲಕ ತನ್ನ ಪ್ರತಿಭೆ ಹೊರಜಗತ್ತಿಗೆ ತೋರಿದ ಸುನೀಲ್ ಅವರಿಗೆ ಅವಕಾಶದ ಬಾಗಿಲು ಬಹುಬೇಗ ತೆರೆಯಿತು. ‘ಅಯೋಗ್ಯ‘ ಚಿತ್ರದ ‘ಏನೀ ಕರ್ಮ ಕಲಾ‘ ಹಾಡಿನ ಮೂಲಕ ಅವರ ಗಾಯನಯಾನ ಶುರುವಾಯಿತು. ‘ಭರಾಟೆ‘ ಸಿನಿಮಾಗೆ ಇವರು ಹಾಡಿದ ‘ಜಯರತ್ನಾಕರ‘ ಹಾಡು ಕರುನಾಡ ಮನೆಮನದ ಹಾಡಾಯಿತು. ‘ರೈಡರ್‘ ಚಿತ್ರದ ‘ರಾಧೆ ರಾಧೆ‘ ಹಾಡಿಂದ ಕೇಳುಗರಿಗೆ ಮಾಡಿ ಮಾಡಿದ್ದ ಸುನೀಲ್ , ‘ಅಯೋಗ್ಯ‘, ‘ಭರಾಟೆ‘, ಸೇರಿದಂತೆ ಅನೇಕ ಕನ್ನಡ ಚಿತ್ರಗಳಿಗೆ ಧ್ವನಿಯಾಗಿದ್ದಾರೆ. ಇದರ ಜೊತೆಗೆ ಸಾಕಷ್ಟು ಆಲ್ಬಮ್ ಸಾಂಗ್ಗಳಿಗೆ ಇವರೇ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿ ಹಾಡಿದ್ದು, ಇವರದೇ ಗಾಯನದ ‘ಬಿಟ್ಟು ಹೋದೆ‘ ಹಾಡು ಮಿಲಿಯನ್ಗಟ್ಟಲೆ ವೀವ್ಸ್ ಪಡೆದಿದೆ. ಈ ಪ್ರತಿಭಾವಂತ ಯುವಗಾಯಕನಿಗೆ ‘ಚಿತ್ತಾರ Promising singer – Male-2025 ಪ್ರಶಸ್ತಿ ನೀಡಿ ಗೌರವಿಸಿದೆ.

