ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಸೀರಿಯಲ್ ನಿಂದ ನಾಯಕ ಅನಿರುದ್ಧ ಅವರನ್ನು ಹೊರಕ್ಕೆ ಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಅವರನ್ನು ಕಿರುತೆರೆಯಿಂದಲೂ ಬಹಿಷ್ಕರಿಸಿದ್ದಾರೆ ಅನ್ನುವ ಸುದ್ದಿ ಓಡಾಡ್ತಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ, ಅನಿರುದ್ಧ ಅವರನ್ನು ಕೈ ಬಿಡಲಾಗಿದೆ ಎನ್ನುವ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಶೂಟಿಂಗ್ ಸ್ಪಾಟ್ ನಲ್ಲೇ ಅವರು ನಿರ್ಮಾಪಕ ಕಂ ನಿರ್ದೇಶಕರ ಜೊತೆ ಕಿರಿಕ್ ಮಾಡಿಕೊಂಡರು ಅನ್ನುವ ಕಾರಣಕ್ಕಾಗಿ ಈ ರೀತಿ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ. ಹಲವು ಬಾರಿ ಇದೇ ರೀತಿ ಅನಿರುದ್ಧ ಅವರು ತಂಡದೊಂದಿಗೆ ನಡೆದುಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿಯೇ ಕಿರುತೆರೆಯಿಂದಲೇ ಅವರನ್ನು ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿಯೂ ಹರಡಿದೆ.
ಈ ಬಗ್ಗೆ ಚಿತ್ತಾರದೊಂದಿಗೆ ಮಾತನಾಡಿದ ಅನಿರುದ್ಧ, ಈ ಸಂಬಂಧ ತನ್ನನ್ನು ತಂಡದವರ್ಯಾರೂ ಸಂಪರ್ಕಿಸಿಲ್ಲ, ಈ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದಾರೆ. ನಿರ್ದೇಶಕರಾಗಲಿ, ಚಾನೆಲ್ನವರಾಗಲಿ ಈ ವಿಚಾರವಾಗಿ ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಕಿರುತೆರೆಯಿಂದ ಬಹಿಷ್ಕರಿಸುವ ಕುರಿತಾಗಿ ನಿರ್ಮಾಪಕರ ಸಂಘದಲ್ಲಿ ನಡೆದಿದೆ ಎನ್ನಲಾದ ಮೀಟಿಂಗ್ಗೂ ಕರೆದಿಲ್ಲ. ಮಾಧ್ಯಮಗಳಿಂದ ಹೀಗೆಲ್ಲ ಸುದ್ದಿಗಳಷ್ಟೆ ನನ್ನ ಕಿವಿಗೆ ಬೀಳುತ್ತಿವೆ. ಅದು ಬಿಟ್ಟರೆ ಮತ್ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಈಗಲೇ ನಾನು ಏನು ಹೇಳಲೂ ಸಾಧ್ಯವಿಲ್ಲ’ ಎಂದು ಅನಿರುದ್ಧ ತಿಳಿಸಿದ್ದಾರೆ. ನಾಯಕನ ವಿಚಾರದಲ್ಲಿ ಇಂಥದ್ದೊಂದು ಬೆಳವಣಿಗೆ ನಡೆಯುತ್ತಿದ್ದು ಮುಂದೇನಾಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.